
ಮರಿಯಮ್ಮನಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳು ಕಾರ್ಮಿಕರ ಪರವಾಗಿರದೆ ಬಂಡವಾಳಶಾಹಿಗಳು ಹಾಗೂ ಕಾರ್ಫೋರೇಟ್ ಕಂಪನಿಗಳ ಮಾಲೀಕರ ಪರವಾದ ನೀತಿಗಳಾಗಿವೆ ಎಂದು ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಯಲ್ಲಾಲಿಂಗ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಉಪಮಾರುಕಟ್ಟೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ನ 2ನೇ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
1996ರ ಸೆಸ್ ಕಾನೂನು ಮೂಲಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಲವು ಸೌಲಭ್ಯಗಳು ಜಾರಿಯಲ್ಲಿವೆ. ಆದರೆ ಕೇಂದ್ರ ಸರ್ಕಾರ ಸೆಸ್ ಕಾನೂನು ಮತ್ತು 1996 ಕಾಯಿದೆಯನ್ನೆ ತೆಗೆದು ಸೌಲಭ್ಯ ವಂಚಿತರಾನ್ನಾಗಿಸಲು ಹೊರಟಿದ್ದಾರೆ. ಅಲ್ಲದೆ ಶ್ರಮಕ್ಕೆ ಸರಿಸಮನಾಗಿ ಕನಿಷ್ಠ ವೇತನ ಪಿಎಫ್, ಇ.ಎಸ್ಐ, ಬೋನಸ್ ಕೊಡಬೇಕೇಂದು ಆದೇಶವಿದ್ದರೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತರಲು ಮುಂದಾಗದೆ ಕಂಪನಿಗಳ ಪರ ಲಾಬಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಇದರಿಂದಾಗಿ ಕಾರ್ಮಿಕರ ಸಮಸ್ಯೆಗಳು ಹೆಚ್ಚುತ್ತಿದ್ದು, ಕಾರ್ಮಿಕರೆಲ್ಲರೂ ಸಂಘಟಿತರಾಗಿ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಇದೇ ಡಿ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಗೋಪಾಲ್, ಕಾರ್ಯದರ್ಶಿ ಆರ್.ಹೇಮಂತ್ ನಾಯ್ಕ, ಮುಖಂಡರಾದ ನನ್ನುಸಾಬ್, ಕೆ.ರಾಮಾಂಜಿನಿ, ಶಬ್ಬೀರ್, ಬಿ.ಎಚ್.ಗಜಾನನ, ಕಾಸಿಂಸಾಬ್, ಹುಸೇನ್ಪೀರಾ, ರಾಜಾಭಕ್ಷಿ, ವಿ.ಡಿ.ಕೃಷ್ಣಾನಾಯ್ಕ, ಬಿ.ನನ್ನುಸಾಬ್, ಕೆ.ವಾಸಿಲ್, ಟಿ.ತಿಪ್ಪಾನಾಯ್ಕ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.