ADVERTISEMENT

ಹೆಚ್ಚುವರಿ 50 ಬಸ್‌ ಸಂಚಾರಬಸ್‌ ನಿಲ್ದಾಣದಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 16:21 IST
Last Updated 26 ಏಪ್ರಿಲ್ 2021, 16:21 IST
ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಸಂಜೆ ಬಸ್‌ಗಳ ಎದುರು ಜನಜಂಗುಳಿ ಕಂಡು ಬಂತು. ಮಂಗಳವಾರದಿಂದ ಕರ್ಫ್ಯೂ ಇರುವುದರಿಂದ ಜನ ಅವರ ಊರುಗಳಿಗೆ ತೆರಳಲು ಒಟ್ಟಿಗೆ ಬಂದದ್ದರಿಂದ ಜನದಟ್ಟಣೆ ಉಂಟಾಗಿತ್ತುಚಿತ್ರ: ಪವನ್‌ ಕುಮಾರ್‌
ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಸಂಜೆ ಬಸ್‌ಗಳ ಎದುರು ಜನಜಂಗುಳಿ ಕಂಡು ಬಂತು. ಮಂಗಳವಾರದಿಂದ ಕರ್ಫ್ಯೂ ಇರುವುದರಿಂದ ಜನ ಅವರ ಊರುಗಳಿಗೆ ತೆರಳಲು ಒಟ್ಟಿಗೆ ಬಂದದ್ದರಿಂದ ಜನದಟ್ಟಣೆ ಉಂಟಾಗಿತ್ತುಚಿತ್ರ: ಪವನ್‌ ಕುಮಾರ್‌   

ಹೊಸಪೇಟೆ (ವಿಜಯನಗರ): ಮಂಗಳವಾರ (ಏ.27) ರಾತ್ರಿಯಿಂದ ಕರ್ಫ್ಯೂ ಇರುವುದರಿಂದ ಸೋಮವಾರ ಸಂಜೆ ಜನ ಅವರ ಊರುಗಳಿಗೆ ತೆರಳಲು ಇಲ್ಲಿನ ಕೇಂದ್ರ ಬಸ್‌ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದದ್ದರಿಂದ ಜನಜಂಗುಳಿ ಕಂಡು ಬಂತು.

ಅನ್ಯ ಜಿಲ್ಲೆಗಳಿಂದ ಕೆಲಸದ ನಿಮಿತ್ತ ನಗರಕ್ಕೆ ಬಂದಿರುವ ಖಾಸಗಿ ಕಂಪನಿಗಳವರು, ಕಟ್ಟಡ ಕಾರ್ಮಿಕರು ಸೇರಿದಂತೆ ಇತರರು ಸೋಮವಾರ ಅವರ ಊರುಗಳಿಗೆ ಹಿಂತಿರುಗಿದರು. ಎರಡು ವಾರ ಕೆಲಸವಿಲ್ಲದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕುಟುಂಬ ಸದಸ್ಯರೊಂದಿಗೆ ಸಾಮಾನು, ಸರಂಜಾಮುಗಳೊಂದಿಗೆ ಇಲ್ಲಿಂದ ನಿರ್ಗಮಿಸಿದರು.

ರಾಯಚೂರು, ಕಲಬುರ್ಗಿ, ಬೀದರ್‌, ದಾವಣಗೆರೆ, ಗದಗ, ಹುಬ್ಬಳ್ಳಿ, ಹೈದರಾಬಾದ್‌, ಬೆಂಗಳೂರು, ಮಂಗಳೂರು ಸೇರಿದಂತೆ ಅನೇಕ ಊರುಗಳಿಗೆ ಜನ ಬಸ್‌ಗಳಲ್ಲಿ ತೆರಳಿದರು. ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಬೇರೆ ಕಡೆಗಳಿಂದ ಬಸ್‌ ಬರುತ್ತಿದ್ದಂತೆ ಜನ ಒಳಗೆ ಹೋಗಲು ಮೂಗಿ ಬೀಳುತ್ತಿರುವುದು ಕಂಡು ಬಂತು. ಅಂತರ ಇರದೆ ಪ್ರಯಾಣಿಕರು ಒಂದೆಡೆ ಸೇರಿದ್ದರು. ಖಾಸಗಿಯವರು ಕೂಡ ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದ್ದರು.

ADVERTISEMENT

‘ಹೊಸಪೇಟೆ ವಿಭಾಗದಿಂದ ಸೋಮವಾರ 315 ಬಸ್‌ಗಳು ವಿವಿಧ ಭಾಗಗಳಿಗೆ ಸಂಚರಿಸಿವೆ. ರಾಜಧಾನಿ ಬೆಂಗಳೂರಿಗೆ 50 ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ. ಮಂಗಳವಾರ ರಾತ್ರಿ ಎಂಟು ಗಂಟೆಯವರೆಗೆ ಬಸ್‌ಗಳ ಸಂಚಾರ ಇರಲಿದ್ದು, ಅಷ್ಟರೊಳಗೆ ಎಲ್ಲ ಬಸ್‌ಗಳು ವಿಭಾಗಕ್ಕೆ ಬಂದು ಸೇರಲಿವೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.