ಹೊಸಪೇಟೆ (ವಿಜಯನಗರ): ವರ್ಷದ ನಂತರ ಮತ್ತೆ ಗಣೇಶ ಉತ್ಸವದ ಸಂಭ್ರಮ ಮರುಕಳಿಸಿದೆ. ಕೋವಿಡ್ ಲಾಕ್ಡೌನ್, ತೈಲ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದರೂ ಜನ ಅದನ್ನು ಲೆಕ್ಕಿಸದೆ ಗುರುವಾರ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆ, ಸೋಗಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಮೇನ್ ಬಜಾರ್ನಲ್ಲಿ ದಿನವಿಡೀ ಜನಜಾತ್ರೆ ಕಂಡು ಬಂತು. ಜನ ಬಗೆಬಗೆಯ ಗಣಪನ ಮಣ್ಣಿನ ಮೂರ್ತಿಗಳನ್ನು
ಖರೀದಿಸಿದರು. ಹೂ, ಬಾಳೆದಿಂಡು, ಕಾಯಿ, ಕರ್ಪೂರ, ಹಣ್ಣು, ತರಕಾರಿ ಖರೀದಿಸಲು ಮುಗಿಬಿದ್ದಿದ್ದರು. ಕುಟುಂಬ ಸಮೇತ ಜನ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದದ್ದರಿಂದ ಜನಜಂಗುಳಿ ಕಂಡು ಬಂತು. ಕೋವಿಡ್ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಜನ ಮಾರುಕಟ್ಟೆಗೆ ಬಂದು, ಖರೀದಿ ಮಾಡಿದ್ದರಿಂದ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಇತ್ತು. ವರ್ಷದ ತರುವಾಯ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಜನ ಬಂದದ್ದರಿಂದ ಹಳೆಯ ದಿನಗಳನ್ನು ನೆನಪಿಸಿತು.
ಇನ್ನೊಂದೆಡೆ ಜಿಲ್ಲಾಡಳಿತವು ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದರಿಂದ ಆಯಾ ಗಣೇಶ ಮಂಡಳಿಯವರು ಅವರ ಬಡಾವಣೆಯಲ್ಲಿ ಪೆಂಡಾಲ್ ಹಾಕುವ ಕಾರ್ಯದಲ್ಲಿ ತೊಡಗಿದ್ದರು. ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿರುವುದು ಕಂಡು ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.