ADVERTISEMENT

ಲೋಕಸಭೆ ಚುನಾವಣೆ: ಭದ್ರತಾ ಪಡೆಗಳಿಂದ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 7:55 IST
Last Updated 8 ಏಪ್ರಿಲ್ 2019, 7:55 IST
   

ಹೊಸಪೇಟೆ:ಲೋಕಸಭೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು, ಮತದಾರರಲ್ಲಿ ಧೈರ್ಯ ಮೂಡಿಸಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳಿಂದ (ಸಿ.ಐ.ಎಸ್‌.ಎಫ್‌.) ಸೋಮವಾರ ನಗರದಲ್ಲಿ ಪಥ ಸಂಚಲನ ನಡೆಯಿತು.

ಇಲ್ಲಿನ ವಡಕರಾಯ ದೇವಸ್ಥಾನದಿಂದ ಆರಂಭಗೊಂಡ ಪಥ ಸಂಚಲನವು ಬಳ್ಳಾರಿ ವೃತ್ತ, ಸಿದ್ದಲಿಂಗಪ್ಪ ಚೌಕಿ, ಮೀರ್‌ ಆಲಂ ಟಾಕೀಸ್‌, ಬಸ್‌ ನಿಲ್ದಾಣ, ರೋಟರಿ ವೃತ್ತ, ಪಟೇಲ್‌ ನಗರ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಚಪ್ಪರದಹಳ್ಳಿ, ಎಸ್‌.ಆರ್‌. ನಗರ, ಮೂರಂಗಡಿ ವೃತ್ತದ ಮೂಲಕ ಹಾದು ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಕೊನೆಗೊಂಡಿತು. ಭದ್ರತಾ ಪಡೆಯವರು ಪಥ ಸಂಚಲನ ಕೈಗೊಂಡಾಗ ಜನ ರಸ್ತೆಬದಿ ನಿಂತು ಕುತೂಹಲದಿಂದ ನೋಡಿದರು.

ಡಿ.ವೈ.ಎಸ್‌.ಪಿ. ನಾಗೇಶ್‌ ಎಲ್‌. ಮಾತನಾಡಿ, ‘ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲಾಗುವುದು. ಜನ ಯಾರಿಗೂ ಭಯಪಡದೆ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಬೇಕು. ಎಲ್ಲ ಮತಗಟ್ಟೆಗಳಿಗೆ ಭದ್ರತೆ ಕಲ್ಪಿಸಲಾಗುವುದು. ಅಲ್ಲದೇ ದಿನವಿಡೀ ಭದ್ರತಾ ಸಿಬ್ಬಂದಿ ನಗರದಲ್ಲಿ ಗಸ್ತು ತಿರುಗುವರು. ಯಾರೂ ಅಮೂಲ್ಯವಾದ ಮತದಾನದ ಹಕ್ಕಿನಿಂದ ವಂಚಿತರಾಗಬಾರದು’ ಎಂದು ಮನವಿ ಮಾಡಿದರು.

ADVERTISEMENT

ಟಿ.ಬಿ. ಡ್ಯಾಂ ಸಿ.ಪಿ.ಐ. ಸಂತೋಷ್‌ ಕುಮಾರ್‌, ಪಟ್ಟಣ ಠಾಣೆ ಸಿ.ಪಿ.ಐ. ಮಂಜುನಾಥ, ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಯ್ಯನಗೌಡ ಪಾಟೀಲ, ಚಿತ್ತವಾಡ್ಗಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿದ್ದೇಶ್ವರ, ಬಡಾವಣೆ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಂಗಪ್ಪ ಬುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.