ಹೊಸಪೇಟೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 27ರಷ್ಟಿರುವ ಎಸ್ಸಿ/ಎಸ್ಟಿ ಸಮುದಾಯದವರು ಇಂದಿಗೂ ಸ್ವಂತ ಮನೆ, ಉದ್ಯೋಗ, ಭೂಮಿ ಹೊಂದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಹಸಿವು, ಬಡತನ, ನಿರುದ್ಯೋಗ, ಅನಾರೋಗ್ಯ, ಅನಕ್ಷರತೆಯಂತಹ ಜ್ವಲಂತ ಸಮಸ್ಯೆಗಳು ಈಗಲೂ ಹಾಗೆಯೇ ಉಳಿದುಕೊಂಡಿವೆ. ಕಾರ್ಪೊರೇಟ್ ಕಂಪನಿಗಳಿಗೆ ಹತ್ತಾರು ಸಾವಿರ ಎಕರೆ ಜಮೀನು ಕೊಡುವ ಸರ್ಕಾರಗಳು ಬಡವರಿಗೆ ಒಂದು ಸಣ್ಣ ಸೂರು ಕಟ್ಟಿಸಿಕೊಡುತ್ತಿಲ್ಲ’ ಎಂದು ಸಮಿತಿ ಜಿಲ್ಲಾ ಅಧ್ಯಕ್ಷ ಎಂ. ಜಂಬಯ್ಯ ನಾಯಕ ದೂರಿದರು.
‘ದಲಿತರ ಎಲ್ಲ ಹಕ್ಕುಗಳಿಗೆ ರಕ್ಷಣೆ ಸಿಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಎಸ್ಸಿ, ಎಸ್ಟಿ, ಒ.ಬಿ.ಸಿ. ಸಮುದಾಯದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಕೊಡಬೇಕು. ನಗರದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ನಿವೇಶನ ಒದಗಿಸಿಕೊಡುವ ಕೆಲಸವಾಗಬೇಕು’ ಎಂದು ಹೇಳಿದರು.
ಸಮಿತಿಯ ಜಿಲ್ಲಾ ಸಹ ಸಂಚಾಲಕರಾದ ಬಿ. ರಮೇಶ್ ಕುಮಾರ್, ಬಿ. ಅಡವಿ ಸ್ವಾಮಿ, ರಾಜು, ತಾಲ್ಲೂಕು ಸಂಚಾಲಕ ಎಸ್. ಸತ್ಯಮೂರ್ತಿ, ಪರಶುರಾಮ, ಜಿ. ಭೀಮಪ್ಪ, ಗಂಗಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.