ಸಂಡೂರು: ತಾಲ್ಲೂಕಿನ ಜೋಗಾ ಗ್ರಾಮದಲ್ಲಿ ಮಂಗವೊಂದು ಗ್ರಾಮದ ತಿಪ್ಪೇರುದ್ರೇಶ್ ಎನ್ನುವವರ ಮೇಲೆ ಗುರುವಾರ ದಾಳಿ ಮಾಡಿ ಎಡಗೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.
ಗ್ರಾಮದಲ್ಲಿ ಸುಮಾರು ಐದಾರು ತಿಂಗಳಿಂದ ಮಂಗನ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ರೋಸಿಹೋಗಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಯಲ್ಲಿ ಸಂಚರಿಸುವಾಗ ಮಂಗವು ಏಕಾಏಕಿ ದಾಳಿ ಮಾಡುವುದರಿಂದ ಜನರು ಜೀವ ಭಯದಲ್ಲೇ ಸಂಚಾರ ಮಾಡುವಂತಾಗಿದೆ.
‘ಮಂಗನ ಹಾವಳಿ ನಿಯಂತ್ರಿಸುವಂತೆ, ಸೆರೆ ಹಿಡಿದು ಬೇರೆಡೆಗೆ ಸಾಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದರಿಂದ ಅರಣ್ಯ ಇಲಾಖೆಯಿಂದ ಗ್ರಾಮದಲ್ಲಿ ಬೋನು ಇರಿಸಲಾಗಿದೆ. ಆದರೆ ಸಿಬ್ಬಂದಿ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಗಿರಿಯಪ್ಪ ಬೇಸರ ವ್ಯಕ್ತಪಡಿಸಿದರು.
‘ಗ್ರಾಮದಲ್ಲಿ ಅಳವಡಿಸಿರುವ ಬೋನಿಗೆ ಮಂಗ ಬೀಳುತ್ತಿಲ್ಲ. ಮಂಗಗಳನ್ನು ಹಿಡಿಯುವ ತಜ್ಞರನ್ನು ಕರೆಸಿ ಮಂಗವನ್ನು ತ್ವರಿತವಾಗಿ ಸೆರೆ ಹಿಡಿದು ಬೇರೆಡೆಗೆ ಸಾಗಿಸಲಾಗುವುದು’ ಎಂದು ಸಂಡೂರಿನ ಉತ್ತರ ವಲಯದ ಅರಣ್ಯಾಧಿಕಾರಿ ಬಿ.ಎಸ್.ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.