ADVERTISEMENT

ಕೊಟ್ಟೂರೇಶ್ವರ ರಥೋತ್ಸವ;ಪಾದಯಾತ್ರಿಗಳಿಗೆ ರಸ್ತೆಯಲ್ಲಿ ಮ್ಯಾಟ್ ಅಳವಡಿಕೆ: ನೇಮರಾಜ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:43 IST
Last Updated 3 ಫೆಬ್ರುವರಿ 2026, 1:43 IST
ಕೆ.ನೇಮರಾಜನಾಯ್ಕ 
ಕೆ.ನೇಮರಾಜನಾಯ್ಕ    

ಕೊಟ್ಟೂರು: ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಆಮಿಸುವ ಪಾದಯಾತ್ರಿಗಳ ಅನುಕೂಲಕ್ಕಾಗಿ ತೆಂಗಿನ ನಾರಿನಿಂದ ಸಿದ್ದಪಡಿಸಿದ ಮ್ಯಾಟ್ ಅಳವಡಿಕೆಗೆ ಚಿಂತನೆ ನಡೆಸಿರುವುದಾಗಿ ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.

ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಪ್ರಾಯೋಗಿಕವಾಗಿ ಶೀಘ್ರದಲ್ಲಿ 8 ಕಿ.ಮೀ. ಉದ್ದದ ಮ್ಯಾಟ್ ತರಿಸಿ ಹಗರಿಬೊಮ್ಮನಹಳ್ಳಿಯಿಂದ ಕೊಟ್ಟೂರಿಗೆ ಹೋಗುವ ರಸ್ತೆಯಲ್ಲಿ ಹಾಸಿ ಪರೀಕ್ಷೆ ಮಾಡಿ, ಸೂಕ್ತವೆಂದು ಕಂಡು ಬಂದಲ್ಲಿ ಕೊಟ್ಟೂರಿಗೆ ಬರುವ ಎಲ್ಲಾ ರಸ್ತೆಗಳಿಗೆ ಮುಂದಿನ ವರ್ಷ ಹಾಕಲಾಗುವುದು. ಅವುಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡಿ ಪ್ರತಿ ವರ್ಷ ಬಳಕೆ ಮಾಡುವ ಆಲೋಚನೆ ಇದೆ’ ಎಂದರು.

‘ದೇವಸ್ಥಾನದ ಆವರಣದಲ್ಲಿ ಸಂಪೂರ್ಣವಾಗಿ ಮ್ಯಾಟ್ ಅಳವಡಿಸಲಾಗುವುದು. ತಿರುಪತಿಯಲ್ಲಿ ಈ ರೀತಿಯ ಮ್ಯಾಟ್‌ಗಳನ್ನು ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿ ಅಳವಡಿಸಲಾಗುವುದು’ ಎಂದರು.

ADVERTISEMENT

‘ದೇವಸ್ಥಾನದ ಇನ್ನೊಂದು ಬದಿ ನೆರಳಿಗಾಗಿ ಚಾವಣಿ ಕಾರ್ಯ ಪೂರ್ಣಗೊಂಡಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ರಥೋತ್ಸವಕ್ಕಾಗಿ ಚಿರಬಿ ರಸ್ತೆ ಹಾಗೂ ಉಜ್ಜಯಿನಿ ರಸ್ತೆಗಳ ಕಾಮಾಗಾರಿ ನಡೆಯುತ್ತಿದ್ದು, ರಥೋತ್ಸವದ ನಂತರ ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲೂ ಸಿಸಿ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ’ ಎಂದರು.

‘ಪೂರ್ವ ಸಿದ್ಧತಾ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ಇಲಾಖಾಧಿಕಾರಿಗಳು ರಥೋತ್ಸವದ ಸಿದ್ಧತಾ ಕಾರ್ಯದಲ್ಲಿ ಯಾವುದೇ ವ್ಯತ್ಯಯವಾಗದಂತೆ ಕಾರ್ಯೋನ್ಮುಖರಾಗಬೇಕು ಎಂದು ಆದೇಶಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.