ADVERTISEMENT

ಇ- ಆಡಳಿತ ಪರಿಶೀಲನೆಗಾಗಿ ಕಚೇರಿ ಭೇಟಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 15:16 IST
Last Updated 2 ನವೆಂಬರ್ 2023, 15:16 IST
ರಾಣೆಬೆನ್ನೂರಿನ ತಹಶೀಲ್ದಾರ ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಇ -ಆಡಳಿತ ಮತ್ತು ವಿವಿಧ ದಾಖಲಾತಿಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ಮಾಡಿದರು. 
ರಾಣೆಬೆನ್ನೂರಿನ ತಹಶೀಲ್ದಾರ ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಇ -ಆಡಳಿತ ಮತ್ತು ವಿವಿಧ ದಾಖಲಾತಿಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ಮಾಡಿದರು.    

ರಾಣೆಬೆನ್ನೂರು: ‘ಬೆಂಗಳೂರಿನಲ್ಲಿ ಕುಳಿತುಕೊಂಡು ಕೇಂದ್ರ ಸ್ಥಾನದ ಜನಪರ ಕಾಯ್ದೆ, ಕಾನೂನುಗಳನ್ನು ರೂಪಿಸಿ ಸಲಹೆ ಸೂಚನೆ ನೀಡಿದರೆ ಸಾಲದು, ಇದರಿಂದ ಸರ್ಕಾರಿ ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ. ಕಂದಾಯ ಇಲಾಖೆಗೆ ಒಳಪಡುವ ಎಲ್ಲಾ ಇಲಾಖೆಗಳನ್ನು ಪರಿಶೀಲಿಸಿ‌ ಅಲ್ಲಿನ ಸಾರ್ವಜನಿಕರ ಕುಂದು ಕೊರತೆಗಳನ್ನು ಬಗೆಹರಿಸಲು ಮತ್ತು ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಇಂದು ಭೇಟಿ ಕೊಡುವ ಕಾರ್ಯಕ್ರಮ ಇದಾಗಿದೆ‘ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಗುರುವಾರ ಭೇಟಿ ನೀಡಿ ಆಡಳಿತ ವ್ಯವಸ್ಥೆ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

’ಕಂದಾಯ ಇಲಾಖೆಗಳಲ್ಲಿನ ಹಳೆಯ ದಾಖಲೆಗಳನ್ನು ಡಿಜಿಟಲಿಕರಣ ಮಾಡುವುದರ ಮೂಲಕ‌ ಇಲಾಖೆಯ ಪ್ರಗತಿಗೆ ಹೆಚ್ಚಿನ ಆಧ್ಯತೆ ನೀಡುವೆ. ಸಣ್ಣಪುಟ್ಟ ಕೆಲಸಗಳಿಗೆ ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಅಂತಹ‌ ಕೆಲಸಗಳಿಗೆ ತ್ವರಿತವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ‘ ಎಂದರು.

ADVERTISEMENT

ನೂರಾರು ವರ್ಷಗಳ‌ ಹಿಂದಿನ ಅನೇಕ ದಾಖಲೆಗಳು ಇಲಾಖೆಗಳಲ್ಲಿ ಹಾಗೇಯೇ ಉಳಿದಿವೆ. ಆಕಸ್ಮಾತ ಏನಾದರೂ‌ ಅವಘಡ ಆಗಿ ದಾಖಲೆಗಳು ನಾಶವಾದರೆ ಸಾರ್ವಕಜನಿಕರಿಗೆ ತೊಂದರೆಯಾಗುವ ಸಂಭವವಿದೆ. ಈ‌ ಹಿನ್ನಲೆಯಲ್ಲಿ ಎಲ್ಲವುಗಳನ್ನು ಡಿಜಿಟಲೀಕರಣ ಮಾಡಲು ರಾಜ್ಯದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಹಳೆಯ ಎಲ್ಲ ದಾಖಲೆಗಳನ್ನು ಶೀಘ್ರ ಡಿಜಿಟಲೀಕರಣ ಮಾಡಲು ಕಟ್ಟಪ್ಪಣೆ‌ ಮಾಡಿದರು. ಇ -ಆಡಳಿತಕ್ಕೂ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಸರ್ವೆ, ಸಬ್ ರಿಜಿಸ್ಟರ್, ರೆಕಾರ್ಡ್ ರೂಂ, ತಹಶೀಲ್ದಾರ ಕೊಠಡಿಗೆ ಬೇಟಿ ನೀಡಿ ವ್ಯವಸ್ಥೆ ಪರೀಶೀಲಿಸಿದರು‌. ಜೊತೆಗೆ ಅಲ್ಲಿದ್ದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.

ಕಚೇರಿಯ ಪಡಸಾಲೆಯ ಕೊಠಡಿ ಸುಣ್ಣ ಬಣ್ಣ ಇಲ್ಲದೇ ಕಸ, ಧೂಳಿನಿಂದ ಕೂಡಿದ್ದನ್ನು ಮತ್ತು ಕಡತಗಳ ರಾಶಿಗಳನ್ನು ಕಂಡು ಕಚೇರಿಯ ಎಂಟ್ರನ್ಸ್‌ ವ್ಯವಸ್ಥೆ ಹೀಗಾದರೆ ಹೇಗೆ ಗತಿ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಭೂ ಸರ್ವೆ ಇಲಾಖೆಯ ಭೂಮಿ ನಕ್ಷೆಗಳು, ಟಿಪ್ಪಣಿ, ಮ್ಯಾಪಿಂಗ್‌, ಆಕಾರ ಬಂದ, ಪಿಟಿ ಸೀಟ್‌, ಅಳತೆ ಬಗ್ಗೆ ಅಧಿಕಾರಿಗಳಿಗೆ ಕೆಲ ತಾಂತ್ರಿಕ ಮಾಹಿತಿ ನೀಡಿ ಕೆಲ ಹಳೇ ದಾಖಲಾತಿಗಳ ಬಗ್ಗೆ ಮಾಹಿತಿಯನ್ನು ಸಚಿವರು ಪಡೆದರು. ದಿನಕ್ಕೆ ಎಷ್ಟು ಹೊಸ ಅರ್ಜಿಗಳು ಬರುತ್ತವೆ ಅವುಗಳನ್ನು ಇ ಆಡಳಿತದ ಮೂಲಕವೇ ದಾಖಲೆಗಳನ್ನು ಇಡಬೇಕು. ನಂತರ ದಾಖಲೆ ಕೊಠಡಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದರು.

ಆನಂತರ ಅಲ್ಲಿನ ಹಳೇ ತಲವಾರನ್ನು ಹಿಡಿದು ತಾವೇ ಸೆಲ್ಫಿ ತೆಗೆದುಕೊಂಡರು. ಸಬ್‌ ರೆಜಿಸ್ಟ್ರಾರ್‌ ಕಚೇರಿಯನ್ನು ಪರಿಶೀಲಿಸಿ ದಿನಕ್ಕೆ ಎಷ್ಟು ನೋಂದಣಿಯಾಗುತ್ತವೆ. ಅಲ್ಲಿನ ಅಧಿಕಾರಿ ವಿಶ್ವನಾಥ ಸುಬೇದಾರ ಅವರು 50- 60 ಕ್ಕೂ ಹೆಚ್ಚು ನೋಂದಣಿ ಅರ್ಜಿಗಳು ಬರುತ್ತವೆ. ಹಾವೇರಿ ಜಿಲ್ಲೆಯಲ್ಲಿಯೇ ರಾಣೆಬೆನ್ನೂರು ನೋಂದಣಿ ಇಲಾಖೆ ಮೊದಲ ಸ್ಥಾನದಲ್ಲಿದ್ದು, ಹಾವೇರಿ ಎರಡನೇ ಸ್ಥಾನದಲ್ಲಿದೆ ಎಂದು ಸಚಿವರಿಗೆ ತಿಳಿಸಿದರು.

ಕಂದಾಯ ಆಯುಕ್ತಲಾಯದ ಆಯುಕ್ತರು ಪೊನ್ನಮಲೈ ಸುನೀಲಕುಮಾರ, ಕಂದಾಯ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಉಪವಿಭಾಗಾಧಿಕಾರಿ ಎಚ್‌.ವಿ. ಚನ್ನಪ್ಪ, ಶಾಸಕ ಶ್ರೀನಿವಾಸ ಮಾನೆ, ತಹಶೀಲ್ದಾರ ಹನುಮಂತಪ್ಪ ಶಿರಹಟ್ಟಿ, ಸರ್ವೆ ಅಧಿಕಾರಿ ಕೂಲೇರ, ಮಂಜುನಾಥ ಕೆಂಚರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ಹರೀಶ ಕೂನಬೇವು, ಕಂದಾಯ ನಿರೀಕ್ಷಕ ಅಶೋಕ‌ ಅರಳೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.