ಹೊಸಪೇಟೆ: ಮೊಹರಂ ಪ್ರಯುಕ್ತ ನಗರದ ಚಿತ್ತವಾಡ್ಗಿಯ ದೊಡ್ಡ ರಾಮಲಿ ಮಸೀದಿ, ರಾಮಾ ಟಾಕೀಸ್ ಬಳಿಯ ಸಣ್ಣ ರಾಮಲಿ ಮಸೀದಿ ಬಳಿ ಮಂಗಳವಾರ ರಾತ್ರಿ ಅಗ್ನಿ ತುಳಿಯುವ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಕೆಂಡ ತುಳಿದು ಹರಕೆ ತೀರಿಸಿದರು. ಹಿರಿಯ ನಾಗರಿಕರು, ಮಹಿಳೆಯರು ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು ಅಗ್ನಿ ತುಳಿದರು. ರಾಮಲಿ ಸ್ವಾಮಿ ಪರ ಜಯಘೋಷ ಹಾಕಿದರು.
ತಡಹೊತ್ತು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಹೂ, ಕರ್ಪೂರ, ನೈವೇದ್ಯ ಸಮರ್ಪಿಸಿದರು. ಇಡೀ ಪರಿಸರದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ರಾತ್ರಿ ಶ್ರದ್ಧಾ, ಭಕ್ತಿಯಿಂದ ನಗರದ ಪ್ರಮುಖ ಮಾರ್ಗಗಳಲ್ಲಿ ಪೀರಲ ದೇವರ ಮೆರವಣಿಗೆ ನಡೆಸಿದರು. ಕೆಲವರು ಹುಲಿ ವೇಷಧಾರಿಗಳಾಗಿ, ಹೆಜ್ಜೆ ಹಾಕಿ ಹರಕೆ ತೀರಿಸಿದರು. ತಡರಾತ್ರಿ ವರೆಗೆ ಜನ ರಸ್ತೆಬದಿಯಲ್ಲಿ ನಿಂತು ಮೆರವಣಿಗೆ ಕಣ್ತುಂಬಿಕೊಂಡರು. ಹಿಂದೂ, ಮುಸ್ಲಿಮ ಸಮುದಾಯದವರು ಭಾಗವಹಿಸಿ, ಭಾವೈಕ್ಯತೆ ತೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.