ಬಳ್ಳಾರಿ: ‘ಅತಿಥಿ ದೇವೋಭವ ಎಂಬ ಸಂಸ್ಕೃತಿಯ ದೇಶದಲ್ಲಿ ಧರ್ಮವನ್ನು ಆಧರಿಸಿ ಪೌರತ್ವವನ್ನು ಕೊಟ್ಟರೇನು ತಪ್ಪು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾವು ಪೌರತ್ವ ಕಿತ್ತುಕೊಳ್ಳುವುದಿಲ್ಲ. ಆದರೆ ಇದನ್ನು ಮುಚ್ಚಿಟ್ಟ ಕಾಂಗ್ರೆಸ್, ಪೌರತ್ವ (ತಿದ್ದುಪಡಿ) ಕಾಯ್ದೆಗೆ ವಿರೋಧ ವ್ಯಕ್ತಪಡಿಸುವಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿದೆ. ರಾಷ್ಟ್ರದ್ರೋಹಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಸ್ವಾತಂತ್ರ್ಯದ ನಂತರ ಪ್ರತ್ಯೇಕ ರಾಷ್ಟ್ರದ ಯೋಚನೆಯನ್ನು ಕಾಂಗ್ರೆಸ್ ಮಾಡಿದ್ದೇ ಪೌರತ್ವ ತಿದ್ದುಪಡಿ ಕಾಯ್ದೆ ಬರಲು ಕಾರಣ. ಕಾಂಗ್ರೆಸ್ಸಿಗರು ಮಹಾತ್ಮ ಗಾಂಧೀಜಿಯನ್ನು ಪೂಜಿಸಿದರು. ಗಾಂಧೀತತ್ವ ಪಾಲಿಸಿದ್ದು ಮೋದಿ ಸರ್ಕಾರ. ಸಿಖ್ಖರಿಗೆ ಪೌರತ್ವ ಏಕೆ ಕೊಡುವುದಿಲ್ಲ ಎಂದು ಮನಮೋಹನ್ ಸಿಂಗ್ ಹಿಂದೆ ಪ್ರಶ್ನಿಸಿದ್ದರು. ಅದನ್ನೀಗ ಕಾಂಗ್ರೆಸ್ ಮರೆತಿದೆ’ ಎಂದು ಟೀಕಿಸಿದರು.
‘ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ನಮ್ಮ ಪಕ್ಷವು ದೇಶದ ಯಾವ ಮುಸಲ್ಮಾನರಿಗೂ ತೊಂದರೆ ಮಾಡಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.