ಹರಪನಹಳ್ಳಿ: ನೆತ್ತಿ ಸುಡುತ್ತಿದ್ದ ಬಿರು ಬಿಸಿಲಿನಲ್ಲೂ ಜನಸಾಗರವೇ ಹರಿದುಬಂದಿದ್ದ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಚಿಗಟೇರಿ ಗ್ರಾಮದಲ್ಲಿ ಭಾನುವಾರ ಅದ್ದೂರಿಯಾಗಿ ಶಿವನಾರದಮುನಿ ರಥೋತ್ಸವ ಜರುಗಿತು.
ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ನಾರದಮುನಿ ಸ್ವಾಮಿಗೆ ಅಭಿಷೇಕ, ಸಕಲ ಪುಷ್ಪಾಲಂಕಾರ ನೆರವೇರಿಸಲಾಯಿತು. ಸಂಜೆ 5ರಿಂದ ದಂಡಗಂಟೆ ದಾಸಪ್ಪಗಳ ನೇತೃತ್ವದಲ್ಲಿ ನಾರದಮುನಿ ಸ್ವಾಮಿ ದೇವಸ್ಥಾನದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಾದ್ಯಗೋಷ್ಠಿಯ ಮೆರವಣಿಗೆ ಮೂಲಕ ರಥದ ಬಳಿ ಕರೆತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಬಳಿಕ 5.41ಕ್ಕೆ ಪೂರ್ವಾಭಿಮುಖವಾಗಿ ಭಕ್ತರು ಬ್ರಹ್ಮ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.
ನೆರೆದಿದ್ದ ಭಕ್ತರಿಂದ ಶ್ರೀ ನಾರದಮುನಿ ಗೋವಿಂದಾ, ಗೋವಿಂದ ಉದ್ಘೋಷ ಮೊಳಗಿತು. ರಥೋತ್ಸವ ಮುಕ್ತಾಯದ ನಂತರ ಹರಪನಹಳ್ಳಿಯತ್ತ ಸಂಚಾರ ಮಾಡುವ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷ ಅಣಬೇರು ರಾಜಣ್ಣ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಹಾಗೂ ಟ್ರಸ್ಟ್ನ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.
ರಥವೇರಿದ ವಿಷ್ಣುವಿನ ಮೂರ್ತಿ: ನಾರದಮುನಿಯ ವಿವಿಧ ಬೆಡಗಿನ ದಂಡಗಂಟೆ ದಾಸಪ್ಪಗಳು ಅಲಂಕೃತ ಪಲ್ಲಕ್ಕಿಯಲ್ಲಿ ವಿಷ್ಣುವಿನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ದಂಡ ಹಿಡಿದು ಬಾರಿಸುತ್ತಾ, ಪಲ್ಲಕ್ಕಿಹೊತ್ತು ರಥದತ್ತ ಸಾಗಿದರು.
ಸಮ್ಮಾಳ, ನಂದಿಕೋಲು ಕುಣಿತದ ಮಜಲುಗಳ ನಡುವೆ ನೆರೆದ ಭಕ್ತರು ನಾರದಮುನಿ ಗೋವಿಂದಾ, ಗೋವಿಂದ ಉದ್ಗೋಷ ಮಾಡುತ್ತಾ, ಇಷ್ಟಾರ್ಥಗಳ ಸಿದ್ಧಿಗೆ ಪ್ರಾರ್ಥಿಸಿ ಪಲ್ಲಕ್ಕಿಯತ್ತ ನಾರುಗಳನ್ನು ಎಸೆದು ಪ್ರಾರ್ಥನೆ ಸಲ್ಲಿಸಿದರು.
ರಥವನ್ನು ಪ್ರದಕ್ಷಿಣೆ ಹಾಕಿದ ಬಳಿಕ ವಿಷ್ಣುವಿನ ಉತ್ಸವ ಮೂರ್ತಿಯನ್ನು ರಥ ಮೇಲೆ ಪ್ರತಿಷ್ಠಾಪಿಸಿ, ರಥಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.