
ತೆಕ್ಕಲಕೋಟೆ: ಸಮೀಪದ ಹಳೇಕೋಟೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ತೆಕ್ಕಲಕೋಟೆಯಿಂದ–ಇಬ್ರಾಹಿಂಪುರ ಹೊರವಲಯದ ವರೆಗಿನ 15.68 ಕಿ.ಮೀ ಕಾಮಗಾರಿಯನ್ನು ಚಿತ್ರದುರ್ಗ ವಿಭಾಗೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿನ್ಯಾಸ ಅಧೀಕ್ಷಕ ಎಂಜಿನಿಯರ್ ವೆಂಕಟೇಶ ಕೆ.ಜಿ, 'ಹೆದ್ದಾರಿ ಕಾಮಗಾರಿಯ ರಸ್ತೆ ನಿರ್ಮಾಣದ ವೇಳೆ ಹಾಗೂ ನಂತರ ಅದರ ಗುಣಮಟ್ಟ ಪರಿಶೀಲನೆ ನಡೆಸುವ ಭಾಗವಾಗಿ ಸ್ಥಳ ಭೇಟಿ ನೀಡಿರುವುದಾಗಿ' ಹೇಳಿದರು.
'ಟಾರು (ಕಪ್ಪು ಡಾಂಬರು) ಕೊರತೆ ಹಿನ್ನೆಲೆ ಕಾಮಗಾರಿಗೆ ವಿಳಂಬವಾಗಿದ್ದು, ಈಗ ಹೆಚ್ಚಿನ ಪ್ರಮಾಣದಲ್ಲಿ ಟಾರು ಸಂಗ್ರಹಿಸಲಾಗಿದ್ದು ಸೋಮವಾರ ಯಥಾಪ್ರಕಾರ ಕಾಮಗಾರಿ ವೇಗ ಪಡೆಯಲಿದೆ' ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಂದರ್ ಒಡೆಯರ್ ಮಾತನಾಡಿ, 'ಸಿರುಗುಪ್ಪ ನಗರದಲ್ಲಿನ ಕಾಮಗಾರಿ ವೇಗ ಪಡೆಯಲಿದ್ದು ಏಪ್ರಿಲ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ' ಎಂದು ಹೇಳಿದರು.
ಪ್ರಾಧಿಕಾರದ ಕಿರಿಯ ಎಂಜಿನಿಯರ್ ಪ್ರತಾಪ್, ಕಿರಿಯ ವಿನ್ಯಾಸ ಎಂಜಿನಿಯರ್ ಅನಿಲ್ ಕುಮಾರ್, ಗುತ್ತಿಗೆದಾರ ಅಂಜನೇಯಲು ಹಾಗೂ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.