ಹೊಸಪೇಟೆ: ‘ಹಂಪಿಯ ತುಂಗಭದ್ರಾ ನದಿ ಸ್ನಾನ ಘಟ್ಟದಲ್ಲಿ ಬೇಕಾಬಿಟ್ಟಿ ಅಸ್ಥಿ ವಿಸರ್ಜನೆ ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ವಿಜಯನಗರ ಸ್ಮಾರಕ, ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಆಗ್ರಹಿಸಿದ್ದಾರೆ.
‘ಅಸ್ಥಿ ವಿಸರ್ಜನೆ, ಪಿಂಡ ಪ್ರದಾನಕ್ಕೆ ಹಂಪಿ ವಿಜಯ ವಿಠಲ ದೇವಸ್ಥಾನ ಹಿಂಭಾಗದ ಸ್ಥಳ ಮೀಸಲಿಡಲಾಗಿದೆ. ಆದರೂ ಕೆಲವರು ಸ್ನಾನಘಟ್ಟದಲ್ಲೇ ಅಂತಿಮ ವಿಧಿ ವಿಧಾನ ನೆರವೇರಿಸಿ, ಅಸ್ಥಿ ವಿಸರ್ಜಿಸುತ್ತಿದ್ದಾರೆ. ಸ್ನಾನಘಟ್ಟದಲ್ಲಿ ನಿತ್ಯ ನೂರಾರು ಜನ ಭಕ್ತರು ಪುಣ್ಯ ಸ್ನಾನ ಮಾಡುತ್ತಾರೆ. ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸೇರಿದಂತೆ ಇತರೆ ಪುರೋಹಿತರು ಇಲ್ಲೇ ಮಡಿ ಸ್ನಾನ ಮಾಡುತ್ತಾರೆ. ಆದರೆ, ಅಸ್ಥಿ ವಿಸರ್ಜಿಸುತ್ತಿರುವುದರಿಂದ ಇಡೀ ಪರಿಸರ ಮಲಿನವಾಗುತ್ತಿದೆ. ಭಕ್ತರಿಗೂ ಕಿರಿಕಿರಿ ಉಂಟಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಸ್ನಾನಘಟ್ಟದ ನೀರು ಕೋದಂಡರಾಮ ದೇವಸ್ಥಾನ, ಯಂತ್ರೋದ್ಧಾರಕ ಆಂಜನೇಯನ ಸ್ವಾಮಿ ದೇವಸ್ಥಾನದ ಮೂಲಕ ಹರಿಯುತ್ತದೆ. ಆ ನೀರಿನಿಂದಲೇ ನಿತ್ಯ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಹೀಗಿದ್ದರೂ ಅದನ್ನು ಅಶುದ್ಧಗೊಳಿಸುತ್ತಿರುವುದು ಎಷ್ಟು ಸರಿ. ಕೂಡಲೇ ಅದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.