ಕುರುಗೋಡು (ಬಳ್ಳಾರಿ ಜಿಲ್ಲೆ): ಮಾರುಕಟ್ಟೆಯಲ್ಲಿ ಪಪ್ಪಾಯ ಹಣ್ಣಿನ ಬೆಲೆಯು ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ 25 ಹೆಕ್ಟೇರ್ ಪ್ರದೇಶದಲ್ಲಿ ರೈತರು ಪಪ್ಪಾಯ ಬೆಳೆದಿದ್ದಾರೆ. ಈ ಬಾರಿ ಉತ್ತಮ ಇಳುವರಿ ಬಂದಿದ್ದು, ಬೆಳೆಗಾರರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ಬೆಲೆ ಕುಸಿತದಿಂದ ಕೃಷಿ ವೆಚ್ಚವೂ ಕೈಗೆ ಸಿಗದಂತಾಗಿದೆ. ಖರೀದಿಗೆ ವ್ಯಾಪಾರಿಗಳು ಸುಳಿಯದ ಕಾರಣ ಗಿಡಗಳಲ್ಲೇ ಹಣ್ಣುಗಳು ಕೊಳೆಯುತ್ತಿವೆ.
ಜನವರಿಯಿಂದ ಮಾರ್ಚ್ವರೆಗೆ ಪಪ್ಪಾಯ ಕೆ.ಜಿಗೆ ₹35ರಿಂದ ₹40 ದರ ಇತ್ತು. ಆದರೆ, ಏಪ್ರಿಲ್ ಆರಂಭದಿಂದ ಹಣ್ಣಿನ ಬೆಲೆ ಕೆ.ಜಿಗೆ ₹2ರಿಂದ ₹2.50ಕ್ಕೆ ಕುಸಿದಿದೆ. ತೋಟದಲ್ಲಿ ನಿರೀಕ್ಷೆಗಿಂತ ಹೆಚ್ಚು ಪಪ್ಪಾಯ ಫಸಲು ಬಂದರೂ ಪ್ರಯೋಜನವಿಲ್ಲದಂತಾಗಿದೆ ಎಂಬುದು ಬೆಳೆಗಾರರ ಅಳಲು.
‘ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಕಾರ್ಮಿಕರಿಗೆ ಕೂಲಿ ನೀಡಲು ಕಷ್ಟವಾಗಲಿದೆ. ಹಣ್ಣು ಕೊಯ್ಲು ಮಾಡುವುದಕ್ಕಿಂತ ಗಿಡದಲ್ಲಿ ಬಿಡುವುದು ಲೇಸು ಎಂಬ ಮನಸ್ಥಿತಿಗೆ ಬಂದಿರುವೆ. ಕಳೆದ ಮೂರು ವರ್ಷಗಳಿಂದಲೂ ಒಂದಿಲ್ಲೊಂದು ಸಮಸ್ಯೆಯನ್ನು ಬೆಳೆಗಾರರು ಎದುರಿಸುವಂತಾಗಿದೆ’ ಎಂದು ಪಪ್ಪಾಯ ಬೆಳೆಗಾರ ಕುರುಗೋಡಿನ ಎನ್. ರಾಜಾ ತಿಳಿಸಿದರು.
ಚೆನ್ನೈ, ಪುಣೆ, ದೆಹಲಿ ಮತ್ತು ಬೆಂಗಳೂರಿಗೆ ಬೇರೆಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಸರಬರಾಜು ಆಗುತ್ತಿದೆ. ಇದರಿಂದ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಕುಸಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ವಾತಾವರಣದಲ್ಲಿ ಅಧಿಕ ತಾಪಮಾನವಿದೆ. ಹೆಚ್ಚು ಪ್ರಮಾಣದ ಹಣ್ಣು ಏಕಕಾಲಕ್ಕೆ ಮಾರುಕಟ್ಟೆಗೆ ಬಂದಿದೆ. ಮಾವಿನಹಣ್ಣಿನ ಸುಗ್ಗಿಯೂ ಇದೆ. ಈ ಕಾರಣದಿಂದ ಪಪ್ಪಾಯ ಬೆಲೆ ಕುಸಿದಿದೆಸಂತೋಷ್ ಸಪ್ಪಂಡಿ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ
ಕಳೆದ ವರ್ಷ ಇಳುವರಿ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿತ್ತು. ಈ ಬಾರಿ ಬೆಲೆ ಕುಸಿದಿದೆ. ವ್ಯಾಪಾರಿಗಳು ಖರೀದಿಗೆ ಬರುತ್ತಿಲ್ಲರಾಜಾಸಾಬ್ ಪಪ್ಪಾಯ ಬೆಳೆಗಾರ ಎಚ್. ವೀರಾಪುರ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.