ADVERTISEMENT

ಪಿತೃಪಕ್ಷ ನಿಮಿತ್ತ ಹಂಪಿಯಲ್ಲಿ ಶ್ರೀರಾಮುಲು ಪೂಜೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 9:47 IST
Last Updated 14 ಸೆಪ್ಟೆಂಬರ್ 2020, 9:47 IST
ಸಚಿವ ಶ್ರೀರಾಮುಲು ಅವರಿಂದ ಪಿತೃಪಕ್ಷ ಪೂಜೆ
ಸಚಿವ ಶ್ರೀರಾಮುಲು ಅವರಿಂದ ಪಿತೃಪಕ್ಷ ಪೂಜೆ    

ಹೊಸಪೇಟೆ: ಪಿತೃ ಪಕ್ಷದ ನಿಮಿತ್ತ ತಾಲ್ಲೂಕಿನ ಹಂಪಿ ತುಂಗಭದ್ರಾ ನದಿ ತಟದಲ್ಲಿ ಸೋಮವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಪೂಜೆ ನೆರವೇರಿಸಿದರು.

ಶ್ರೀರಾಮುಲು ಅವರು ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ಮಡಿ ಬಟ್ಟೆ ತೊಟ್ಟು, ಕೋದಂಡರಾಮ ದೇವಸ್ಥಾನದ ಮಂಟಪದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ತೆಪ್ಪದಲ್ಲಿ ತೆರಳಿ, ಚಕ್ರತೀರ್ಥದಲ್ಲಿ ಪೂಜಾ ವಸ್ತುಗಳನ್ನು ವಿಸರ್ಜಿಸಿದರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷನ ದರ್ಶನ ಮಾಡಿದರು.

‘ಹಿರಿಯರ ಸದ್ಗತಿಗಾಗಿ ಪಿತೃಪಕ್ಷದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಸಾಕಿ ಸಲುಹಿದ ಹಿರಿಯರು, ಎಲ್ಲ ಪ್ರಾಣಿ, ಪಕ್ಷಿಗಳ ಒಳಿತಿಗಾಗಿ ಈ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ವರ್ಷ ವಿವಿಧ ಭಾಗಗಳಿಂದ ನೂರಾರು ಜನ ಹಂಪಿಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ದಿನ ಸಚಿವರು ಬಂದು ಪೂಜೆ ಮಾಡಿದ್ದಾರೆ’ ಎಂದು ಪುರೋಹಿತ ಮೋಹನ್‌ ಚಿಕ್ಕಭಟ್‌ ಜೋಶಿ ತಿಳಿಸಿದರು.

ADVERTISEMENT

ಪೂಜೆ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರಿಂದ ಹಂಪಿಯಲ್ಲಿ ಕೈಗೊಂಡಿರುವ ಜೀರ್ಣೊದ್ಧಾರ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಮುಖಂಡರಾದ ಪಂತರ್‌ ಜಯಂತ್‌, ಜಂಬಾನಹಳ್ಳಿ ವಸಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.