ಬಳ್ಳಾರಿ: ‘ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ನಗರ ಹೊರವಲಯದ ಅಲ್ಲೀಪುರ ಸಮೀಪದ ಮೇಲ್ಮಟ್ಟದ ಕಾಲುವೆ ಹತ್ತಿರ ತುಂಗಭದ್ರ ರೈತ ಸಂಘದ ಮುಖಂಡರು ಗುರುವಾರ ಧರಣಿ ನಡೆಸಿದರು.
‘ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರದಂತೆ ಡಿ.6ರಿಂದ ಬೆಳೆಗಳಿಗೆ ನೀರು ಹರಿಸಲು ಆಗುವುದಿಲ್ಲ ಎಂದು ತುಂಗಭದ್ರಾ ಜಲಾಶಯದ ಮುಖ್ಯ ಅಧಿಕಾರಿ ಮಂಜಪ್ಪ ಅವರ ಹೇಳಿಕೆ ರೈತರಲ್ಲಿ ಆತಂಕ ಮೂಡಿಸಿದ್ದಾರೆ’ ಎಂದು ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಆರೋಪಿಸಿದರು.
‘ನೀರಿನ ಕೊರತೆ ಇರುವುದರಿಂದ ಡಿ.6ರಿಂದ 30ರವರೆಗೂ ನೀರು ಹರಿಸದಿದ್ದರೆ ಕಾಲುವೆ ಕೊನೆಯ ರೈತರಿಗೆ ನೀರು ಸಿಗದೆ ಒಂದು ಲಕ್ಷ ಎಕರೆಯಲ್ಲಿ ಬೆಳೆದ ಮೆಣಸಿನ ಬೆಳೆ ಹಾಗೂ ಐವತ್ತು ಸಾವಿರ ಎಕರೆಯ ಹತ್ತಿ ಬೆಳೆ ಹಾಳಾಗುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಂಚಾರ ಸ್ಥಗಿತ: ಕಾಲುವೆ ಪಕ್ಕದ ಹೊಸಪೇಟೆ ರಸ್ತೆಯಲ್ಲೇ ಕುಳಿತು ರೈತರ ಧರಣಿ ನಡೆಸಿದ ಪರಿಣಾಮವಾಗಿ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ರೈತರಾದ ವೀರೇಶ್, ಬಸವನಗೌಡ, ಶಿವಯ್ಯ, ಟಿ.ರಂಜಾನ್ ಸಾಬ್, ರಾಮನಗೌಡ, ಮಲ್ಲಪ್ಪ, ಶ್ರೀಧರ್, ವೀರನಗೌಡ, ಸತ್ಯನಾರಾಯಣ ರಾವ್, ಭೀಮನಗೌಡ, ಸಿದ್ದಪ್ಪ, ಬಸಯ್ಯಸ್ವಾಮಿ, ಎಲೆ ಪಂಪಾಪತಿ, ತಿರುಮಲೇಶ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.