ಹೊಸಪೇಟೆ: ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಅನ್ಯಾಯವಾಗಿದ್ದು, ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಮಂಗಳವಾರ ಇಲ್ಲಿನ ಚಪ್ಪರದಹಳ್ಳಿಯಲ್ಲಿರುವ ಶಾಸಕ ಗಣೇಶ್ ಮನೆಗೆ ಭೇಟಿ ನೀಡಿ, ಅವರ ಪತ್ನಿ ಶ್ರೀದೇವಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಘಟನೆಯಲ್ಲಿ ಗಣೇಶ್ ಅವರು ಪೆಟ್ಟು ತಿಂದಿದ್ದಾರೆ. ಜಾತಿ ನಿಂದನೆ ಮಾಡಲಾಗಿದೆ. ಗಣೇಶ್ ಅವರು ಶಾಸಕ ಆನಂದ್ ಸಿಂಗ್ ವಿರುದ್ಧ ದೂರು ಕೊಡಲು ಮುಂದಾದಾಗ ಕಾಂಗ್ರೆಸ್ಸಿನ ಕೆಲ ಪ್ರಭಾವಿ ಮುಖಂಡರು ಅದನ್ನು ತಡೆದಿದ್ದಾರೆ. ಶಾಸಕನ ವಿರುದ್ಧ ಜಾತಿ ನಿಂದನೆ ದೂರು ಕೊಡುವುದು ಬೇಡ ಎಂದು ನಾನು ದೂರವಾಣಿಯಲ್ಲಿ ಹೇಳಿದ್ದೆ ಎಂದರು.
ಗಣೇಶ್ ವಿರುದ್ಧದ ಕೊಲೆ ಯತ್ನ ಪ್ರಕರಣ ವಾಪಸ್ ಪಡೆಯಬೇಕು. ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಘಟನೆ ವೇಳೆ ಶಾಸಕ ಭೀಮಾ ನಾಯ್ಕ ಸ್ಥಳದಲ್ಲಿದ್ದರು. ಅವರು ಸತ್ಯ ಹೇಳಬೇಕು. ಯಾರೇ ತಪ್ಪೆಸಗಿದರೂ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಗಣೇಶ್ ಯಾವುದೇ ತಪ್ಪು ಮಾಡಿಲ್ಲ. ಸರೆಂಡರ್ ಯಾಕಾಗಬೇಕು. ಇದೇ ಸರ್ಕಾರದಲ್ಲಿ ಗಣೇಶ್ ಮಂತ್ರಿ ಆಗುತ್ತಾರೆ. ಅವರ ಕುಟುಂಬ ಸದಸ್ಯರು ಆತಂಕದಲ್ಲಿದ್ದು ಧೈರ್ಯ ತುಂಬಲು ಬಂದಿದ್ದೇನೆ. ಈಗಲೂ ನನಗೆ ಪಕ್ಷದ ಮೇಲೆ ಅಸಮಾಧಾನವಿದೆ. ಆದರೆ, ಪಕ್ಷ ಬಿಡೊಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜಾರಕಿಹೊಳಿ ಬರುವ ವಿಷಯ ತಿಳಿದು ನಾಯಕ ಸಮುದಾಯದ ನೂರಾರು ಜನ ಗಣೇಶ್ ಮನೆ ಬಳಿ ಸೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.