ಹೊಸಪೇಟೆ: ಈ ಸಲ ತಾಲ್ಲೂಕಿನ ಕಬ್ಬಿನ ಗಾಣಗಳು ದಾಖಲೆ ಪ್ರಮಾಣದಲ್ಲಿ ಬೆಲ್ಲ ಉತ್ಪಾದನೆ ಮಾಡಿವೆ.
ನಗರದ ಚಿತ್ತವಾಡ್ಗಿಯಲ್ಲಿರುವ ತಾಲ್ಲೂಕಿನ ಏಕೈಕ ಸಕ್ಕರೆ ಕಾರ್ಖಾನೆ ‘ಇಂಡಿಯನ್ ಶುಗರ್ ರಿಫೈನರಿ‘ (ಐ.ಎಸ್.ಆರ್.) ಬಾಗಿಲು ಮುಚ್ಚಿರುವುದರಿಂದ ಈ ಬಾರಿ ಅನಿವಾರ್ಯವಾಗಿ ರೈತರು ಆಲೆಮನೆಗಳತ್ತ ಮುಖ ಮಾಡಬೇಕಾಯಿತು. ಅದನ್ನೇ ಬಂಡವಾಳ ಮಾಡಿಕೊಂಡು ಕಬ್ಬಿನ ಗಾಣದವರು ದಾಖಲೆ ಪ್ರಮಾಣದಲ್ಲಿ ಬೆಲ್ಲ ತಯಾರಿಸಿ ಕೈ ತುಂಬ ಹಣ ಗಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು ನಾಲ್ಕೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಈ ಪೈಕಿ ಒಂದೂವರೆ ಲಕ್ಷ ಟನ್ ಕಬ್ಬನ್ನು ರೈತರು ಆಲೆಮನೆಗಳಿಗೆ ಸಾಗಿಸಿದ್ದಾರೆ. 13 ಸಾವಿರ ಟನ್ ದಾಖಲೆ ಪ್ರಮಾಣದ ಬೆಲ್ಲ ಉತ್ಪಾದನೆ ಮಾಡಿದ್ದಾರೆ. ಇನ್ನೂ ಬೆಲ್ಲ ಉತ್ಪಾದನೆ ಮುಂದುವರೆದಿದೆ. ಕಬ್ಬಿನ ಗಾಣಗಳಿಗೆ ಕಬ್ಬು ಪೂರೈಸಿದವರು ಬಹುತೇಕ ಸಣ್ಣ ಮತ್ತು ಅತಿ ಸಣ್ಣ ರೈತರು ಎನ್ನುವುದು ವಿಶೇಷ.
ದೊಡ್ಡ ರೈತರು ಮೈಲಾರ, ಮುಂಡರಗಿ, ದುಗ್ಗತಿ, ಕುಕ್ಕವಾಡ ಸೇರಿದಂತೆ ಇತರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದಾರೆ. ಸರ್ಕಾರ ಈ ಸಲ ಪ್ರತಿ ಟನ್ ಕಬ್ಬಿಗೆ ₹2,750 ನಿಗದಿ ಪಡಿಸಿತ್ತು. ಕಬ್ಬು ಕಟಾವು, ಸಾಗಣೆ ವೆಚ್ಚದ ಹೊರೆಯಿಂದ ತಪ್ಪಿಸಿಕೊಳ್ಳಲು ಸಣ್ಣ ರೈತರು ದೂರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವುದರ ಬದಲು ಆಲೆಮನೆಗಳಿಗೆ ಸಾಗಿಸಿದ್ದಾರೆ. ಡಿಸೆಂಬರ್ ವರೆಗೆ ಕಬ್ಬಿನ ಗಾಣಗಳು ಪ್ರತಿ ಟನ್ ಕಬ್ಬಿಗೆ ₹1,200 ಪಾವತಿಸಿದರೆ, ಜನವರಿಯಿಂದ ₹2,100 ಪಾವತಿಸುತ್ತಿವೆ.
‘ರೈತರು ದೊಡ್ಡ ಸಂಖ್ಯೆಯಲ್ಲಿ ಆಲೆಮನೆಗಳಿಗೆ ಕಬ್ಬು ಪೂರೈಸಿದ್ದರಿಂದ ಡಿಸೆಂಬರ್ ವರೆಗೆ ಪ್ರತಿ ಟನ್ ಕಬ್ಬಿಗೆ ಕಬ್ಬಿನ ಗಾಣದವರು ₹1,200 ಕೊಟ್ಟಿದ್ದಾರೆ. ಜನವರಿಯಲ್ಲಿ ಕಬ್ಬಿನ ಪೂರೈಕೆ ಕಡಿಮೆಯಾಗಿದ್ದರಿಂದ ಟನ್ ಕಬ್ಬಿಗೆ ₹2,100 ಪಾವತಿಸುತ್ತಿವೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್ ಹೇಳಿದರು.
ಈ ಆರೋಪವನ್ನು ಕಬ್ಬಿನ ಗಾಣ ಮಾಲೀಕರು ನಿರಾಕರಿಸುತ್ತಾರೆ. ‘ಕಬ್ಬು ಪೂರೈಸುವಂತೆ ಯಾವ ರೈತರ ಮೇಲೆಯೂ ಒತ್ತಡ ಹೇರಿಲ್ಲ. ಸ್ವಯಂಪ್ರೇರಿತರಾಗಿ ಕಬ್ಬು ಪೂರೈಸಿದ್ದಾರೆ. ಅನ್ಯಾಯವೆಸಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎನ್ನುತ್ತಾರೆ ಸ್ಥಳೀಯ ಆಲೆಮನೆಯೊಂದರ ಮಾಲೀಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.