ಬಳ್ಳಾರಿ: ‘ಶಾಸಕ ಜನಾರ್ದನ ರೆಡ್ಡಿ ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದು, ಕರ್ನಾಟಕದ ಸಂಪನ್ಮೂಲ ಲೂಟಿ ಮಾಡಿದ್ದಾರೆ. ರಾಜ್ಯ ಸರ್ಕಾರ ಈಗಲಾದರೂ ಇದರ ವಸೂಲಿಗೆ ಗಂಭೀರ ಚಿಂತನೆ ಮಾಡಬೇಕು’ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆಗ್ರಹಿಸಿದರು.
‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡ್ಡಿ ವಿರುದ್ಧ ತೀರ್ಪು ಯಾವಾಗಲೋ ಬರಬೇಕಿತ್ತು. ಆದರೆ, ರಾಜಕೀಯ ಪ್ರಭಾವದಿಂದ ವಿಳಂಬವಾಯಿತು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರೋಸಯ್ಯ ಅವರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ. ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಂಧ್ರದಿಂದ ಗಣಿಗಾರಿಕೆಗೆ ಅನುಮತಿ ಪಡೆದು, ಜನಾರ್ದನ ರೆಡ್ಡಿ ಕರ್ನಾಟಕ ಸರ್ಕಾರದ ಸಂಪತ್ತು ಲೂಟಿ ಮಾಡಿದ್ದರು. 29 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿರುವ ಬಗ್ಗೆ ಸಿಬಿಐ ತನ್ನ ಚಾರ್ಜ್ಶೀಟ್ನಲ್ಲೇ ಉಲ್ಲೇಖಿಸಿದೆ. ರಾಜ್ಯದ ಇತರ ಗಣಿ, ಅಕ್ಕಪಕ್ಕದ ಪ್ರದೇಶಗಳು ಮತ್ತು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ್ದಾರೆ’ ಎಂದರು.
‘ಬಳ್ಳಾರಿ ಮೀಸಲು ಅರಣ್ಯದಲ್ಲಿ ಅಂತರರಾಜ್ಯ ಗಡಿ ಹಾದು ಹೋಗಿದೆ. ರೆಡ್ಡಿ ಗಣಿ ಅಂತರರಾಜ್ಯ ಗಡಿಗೆ ಹೊಂದಾಣಿಕೆಯೇ ಆಗುತ್ತಿಲ್ಲ. ಆದರೆ, ನಮ್ಮ ಅಧಿಕಾರಿಗಳೇ ರೆಡ್ಡಿಗೆ ನಕ್ಷೆ ಹೊಂದಾಣಿಕೆ ಮಾಡಿಕೊಟ್ಟರು. ಆದ್ದರಿಂದಲೇ ಇಷ್ಟು ಅಕ್ರಮ ಮಾಡಲು ರೆಡ್ಡಿಗೆ ಸಾಧ್ಯವಾಯಿತು. 2008ರಿಂದ 2011ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿದ್ದ ಅಧಿಕಾರಿಗಳ ಸಹಕಾರದಿಂದ ರೆಡ್ಡಿ ಇಷ್ಟು ಲೂಟಿ ಮಾಡಲು ಸಾಧ್ಯವಾಯಿತು’ ಎಂದರು.
‘ಇವತ್ತಾದರೂ ರಾಜ್ಯ ಸರ್ಕಾರ ಅಂತರರಾಜ್ಯ ನಕ್ಷೆಯಲ್ಲಿನ ದೋಷ ಪರಿಶೀಲಿಸಬೇಕು. ಅದಿರು ಕಳ್ಳಸಾಗಣೆ ಮೂಲಕ ರಾಜ್ಯಕ್ಕೆ ಆಗಿರುವ ನಷ್ಟವನ್ನು ಜನಾರ್ದನ ರೆಡ್ಡಿಯಿಂದ ವಸೂಲಿ ಮಾಡಬೇಕು’ ಎಂದರು.
ಹೋರಾಟಕ್ಕೆ ಸಿಕ್ಕ ಜಯ:
ಹಿರೇಮಠ ‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನಲ್ಲಿನ ಕರ್ನಾಟಕ ಗಡಿಗೆ ಹೊಂದಿಕೊಂಡಂತೆ ಓಬಳಾಪುರಂ ಮೈನಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ (ಒಎಂಸಿಪಿಎಲ್) ಮೂರು ಗಣಿಗಳನ್ನು ಹೊಂದಿದೆ. ಅದರಲ್ಲಿ ಅಂತರಗಂಗಮ್ಮ ಕೊಂಡದಲ್ಲಿರುವ ಗಣಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದ ತೀರ್ಪು ಇದು. ಇನ್ನೂ ಎರಡು ಗಣಿಗಳಲ್ಲಿನ ಅಕ್ರಮದ ವಿಚಾರಣೆ ಬಾಕಿ ಇದೆ. ಸದ್ಯ ಸಿಬಿಐ ತೀರ್ಪು ಮಹತ್ವದ್ದು. ಮೈನಿಂಗ್ ಮಾಫಿಯಾಕ್ಕೆ ಹೊಡೆತ ಬಿದ್ದಿದೆ. ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿದೆ’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.