
ಕುರುಗೋಡು: ರೇಣುಕಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ರೇಣುಕಾಚಾರ್ಯರ ಚಿತ್ರ ಮೆರವಣಿಗೆಯು ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು, ರಾಘವಾಂಕ ಶಿವಾಚಾರ್ಯ ಸ್ವಾಮೀಜಿ ಮಠದ ಆವರಣದಲ್ಲಿ ಸಮಾವೇಶಗೊಂಡಿತು.
ವೀರಭದ್ರ ವೇಷ, ವೀರಗಾಸೆ, ನಂದಿ ಧ್ವಜ, ಡೊಳ್ಳು, ಮೇಳ, ಸಮಾಳ ವಾದ್ಯ ಮೆರುಗು ಹೆಚ್ಚಿಸಿತು. ಮಹಿಳೆಯರು ಕಳಸ ಹಾಗೂ ಪೂರ್ಣಕುಂಭ ಹೊತ್ತು ಸಾಗಿದರು.
ಹರಗಿನಡೋಣಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ವರಿಗೂ ಹಿತವಾದ ಧರ್ಮವನ್ನು ಬೋಧನೆ ಮಾಡುವ ಸದುದ್ದೇಶದಿಂದಲೇ ರೇಣುಕಾಚಾರ್ಯರು ಭೂಮಿ ಮೇಲೆ ಜನ್ಮ ತಾಳಿದರು. ಪೃಥ್ವಿ ತತ್ವ ಬೋಧಿಸಿದ ಅವರನ್ನು ಎಲ್ಲ ಧರ್ಮಿಯರು ಪೂಜಿಸಬೇಕು’ ಎಂದರು.
‘ಯಾರ ಮನಸನ್ನೂ ನರಳಿಸದೆ, ಕೆರಳಿಸದೆ, ಅರಳಿಸಿದ ಧರ್ಮವೆಂದರೆ ಅದು ವೀರಶೈವ ಧರ್ಮ. ಮನುಜ ಮತವನ್ನು ವಿಶ್ವಪಥವನ್ನಾಗಿಸಿದ ಶ್ರೇಷ್ಠ ಧರ್ಮವಿದು’ ಎಂದು ಬಣ್ಣಿಸಿದರು.
ಇಟಗಿ ಮಠದ ಗುರು ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಎಚ್. ವೀರಾಪುರ ಶಿವಲಿಂಗ ಮಠದ ಜಡೇಶ ಸ್ವಾಮಿ ಮಾತನಾಡಿದರು.
ತಾಲ್ಲೂಕು ಕಚೇರಿ: ಇಲ್ಲಿ ರೇಣುಕಾಚಾರ್ಯರ ಚಿತ್ರಕ್ಕೆ ಗ್ರೇಡ್–2 ತಹಶೀಲ್ದಾರ್ ಮಲ್ಲೇಶಪ್ಪ ಅವರು ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.