ಕೂಡ್ಲಿಗಿ: ಪಟ್ಟಣದ ಒಂದು ಮತ್ತು ಒಂಬತ್ತನೇ ವಾರ್ಡ್ಗಳು ಮೂಲಸೌಕರ್ಯದಿಂದ ವಂಚಿತವಾಗಿವೆ.ಕೂಡ್ಲಿಗಿಯಿಂದ ಸಂಡೂರು ಕಡೆ ಹೋಗುವ ರಾಜ್ಯ ಹೆದ್ದಾರಿಯ ಬಲಕ್ಕೆ ಒಂದನೇ ವಾರ್ಡ್, ಎಡಕ್ಕೆ ಮೂರನೇ ವಾರ್ಡ್ ಇದೆ. ಈ ಎರಡೂ ವಾರ್ಡುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಚರಂಡಿಗಳು ಸ್ವಚ್ಛತೆ ಕಾಣದೆ ಎಷ್ಟೋ ತಿಂಗಳಾಗಿವೆ.
ಸಂಡೂರು ರಸ್ತೆಯಿಂದ ಚಿದಂಬರೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಸಂಡೂರು ರಸ್ತೆಯಿಂದ ಊರಮ್ಮ ಬಾವಿಯ ಮೂಲಕ ಹೊಸಪೇಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ತಗ್ಗು ಗುಂಡಿಗಳಿಂದ ಕೂಡಿದೆ. ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಯ ಮುಂದಿನ ರಸ್ತೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಸ್ವಲ್ಪ ಮಳೆ ಬಿದ್ದರೂ ರಸ್ತೆಗಳು ಕೊಚ್ಚೆಗಳಾಗುತ್ತವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವುದೆ ಹರಸಾಹಸ.
‘ಒಂಬತ್ತನೇ ವಾರ್ಡಿನಲ್ಲಿ ಹಳ್ಳ ಹರಿದು ಹೋಗುತ್ತದೆ. ಹಳ್ಳದ ಅಕ್ಕಪಕ್ಕದಲ್ಲಿ ಜನ ವಾಸ ಮಾಡುತ್ತಿದ್ದಾರೆ. ಆದರೆ, ದಂಡೆಯೂ ಸೇರಿದಂತೆ ಹಳ್ಳದ ತುಂಬ ಪೊದೆ, ಮುಳ್ಳು ಬೆಳೆದಿದೆ. ಮಳೆ ಬಂದರೆ ಹಳ್ಳದ ನೀರು ಮನೆ ಹೊಕ್ಕುತ್ತದೆ. ದುರ್ಗಂಧ, ಸೊಳ್ಳೆಗಳ ಹಾವಳಿಗೆ ಜನ ಬೇಸತ್ತು ಹೋಗಿದ್ದಾರೆ’ ಎನ್ನುವುದು ಸ್ಥಳೀಯರ ಆರೋಪ.
‘ಎರಡು ವಾರ್ಡುಗಳಲ್ಲಿ ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುವುದು. ನಂತರ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ಫಕ್ರುದ್ದೀನ್ ಸಾಬ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.