ADVERTISEMENT

ಹೂವಿನಹಡಗಲಿ | ಆರ್‌ಎಸ್ಎಸ್‌ ಶತಾಬ್ದಿ: ಗಣವೇಷಧಾರಿಗಳ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:31 IST
Last Updated 19 ಅಕ್ಟೋಬರ್ 2025, 5:31 IST
ಹೂವಿನಹಡಗಲಿಯಲ್ಲಿ ಆರ್ ಎಸ್ಎಸ್ ಶತಾಬ್ದಿ ಪ್ರಯುಕ್ತ ಗಣವೇಷಧಾರಿಗಳ ಪಥ ಸಂಚಲನ ಜರುಗಿತು
ಹೂವಿನಹಡಗಲಿಯಲ್ಲಿ ಆರ್ ಎಸ್ಎಸ್ ಶತಾಬ್ದಿ ಪ್ರಯುಕ್ತ ಗಣವೇಷಧಾರಿಗಳ ಪಥ ಸಂಚಲನ ಜರುಗಿತು   

ಹೂವಿನಹಡಗಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಪ್ರಯುಕ್ತ ಶನಿವಾರ ಪಟ್ಟಣದಲ್ಲಿ ಗಣವೇಷಧಾರಿಗಳ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.

ಅಲಂಕೃತ ವಾಹನದಲ್ಲಿ ಭಾರತ ಮಾತೆ, ಆರ್‌ಎಸ್ಎಸ್ ಸಂಸ್ಥಾಪಕರ ಭಾವಚಿತ್ರಗಳ ಮೆರವಣಿಗೆಯೊಂದಿಗೆ ತಾಲ್ಲೂಕು ಕ್ರೀಡಾಂಗಣದಿಂದ ಪಥ ಸಂಚಲನ ಪ್ರಾರಂಭವಾಯಿತು. ಬೈಪಾಸ್ ರಸ್ತೆ ಮೂಲಕ ಎಪಿಎಂಸಿ ವೃತ್ತ, ಮದಲಗಟ್ಟಿ ವೃತ್ತ, ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ, ಅಂಬೇಡ್ಕರ್ ವೃತ್ತ ಮೂಲಕ ಪಥ ಸಂಚಲನ ಸಂಚರಿಸಿ ಮೂಲ ಸ್ಥಳದಲ್ಲಿ ಮುಕ್ತಾಯಗೊಂಡಿತು.

ಪಥ ಸಂಚಲನದ ಮಾರ್ಗವನ್ನು ಕೇಸರಿ ಧ್ವಜ, ಬಂಟಿಂಗ್ಸ್, ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಗಣ್ಯರು, ಸಾರ್ವಜನಿಕರು ಗಣವೇಷಧಾರಿಗಳ ಮೇಲೆ ಪುಷ್ಪಾರ್ಚನೆ ಮಾಡಿದರು. ಮೆರವಣಿಗೆಯುದ್ದಕ್ಕೂ ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗಿತು. ಶಾಸಕ ಕೃಷ್ಣನಾಯ್ಕ ಸೇರಿದಂತೆ ಬಿಜೆಪಿ ಮುಖಂಡರು, ಸ್ವಯಂ ಸೇವಕರು, ಇತರೆ ಪ್ರಮುಖರು ಗಣವೇಷಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ADVERTISEMENT

ತಾಲ್ಲೂಕು ಕ್ರೀಡಾಂಗಣದಲ್ಲಿ ಸಮಾರೋಪ ಕಾರ್ಯಕ್ರಮ ಜರುಗಿತು. ಆರ್‌ಎಸ್ಎಸ್ ಜಿಲ್ಲಾ ಪ್ರಮುಖ ಪಾಂಡುರಂಗ ಅಪ್ಟೆ ಮಾತನಾಡಿ, ಆಕ್ರಮಣಗಳಿಂದ ಜಗತ್ತಿನ ನಾಗರಿಕತೆಗಳು ನಾಶವಾಗಿದ್ದರೆ ಹಿಂದೂ ಸಮಾಜ ಆಕ್ರಮಣಗಳನ್ನು ಮೀರಿ ಗಟ್ಟಿಯಾಗಿ ನಿಂತಿದೆ. ಇದರ ಬೇರುಗಳು ಆಳವಾಗಿರುವುದರಿಂದ ಯಾರ ವಿರೋಧಕ್ಕೂ ಜಗ್ಗುವುದಿಲ್ಲ, ಕುಗ್ಗುವುದಿಲ್ಲ. ಎಲ್ಲರೂ ಒಗಟ್ಟಿನಿಂದ ಈ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಮುಸ್ಲಿಂ, ಕ್ರಿಶ್ಚಿಯನ್ನರನ್ನು ವಿರೋಧಿಸಲು ಆರ್ ಎಸ್ಎಸ್ ಹುಟ್ಟಿಲ್ಲ. ಹಿಂದೂ ಸಮಾಜದ ನ್ಯೂನ್ಯತೆ ಸರಿಪಡಿಸಲು ಸಂಘ ಹುಟ್ಟಿದೆ ಎಂದು ಹೇಳಿದರು. ಭರತಕುಮಾರ್ ಚವ್ಹಾಣ್ ಅಧ್ಯಕ್ಷತೆ ವಹಿಸಿದ್ದರು.

ಹೂವಿನಹಡಗಲಿ ತಾಲ್ಲೂಕು ಕ್ರೀಡಾಂಗಣದಲ್ಲಿ ಆರ್ ಎಸ್ಎಸ್ ಶತಾಬ್ದಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣವೇಷಧಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.