ADVERTISEMENT

ಸಂಡೂರು, ಕೊಟ್ಟೂರಿನಲ್ಲಿ ಬಿರುಗಾಳಿ ಮಳೆ: ಹಾರಿ ಹೋದ 15 ಮನೆಗಳ ಶೀಟು, ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 14:23 IST
Last Updated 9 ಏಪ್ರಿಲ್ 2019, 14:23 IST
ಸಂಡೂರು ತಾಲ್ಲೂಕಿನ ಎಸ್‌. ಓಬಳಾಪುರದಲ್ಲಿ ಮಂಗಳವಾರ ಸಂಜೆ ಸುರಿದ ಮಳೆಗೆ ಗ್ರಾಮದ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯಿತು
ಸಂಡೂರು ತಾಲ್ಲೂಕಿನ ಎಸ್‌. ಓಬಳಾಪುರದಲ್ಲಿ ಮಂಗಳವಾರ ಸಂಜೆ ಸುರಿದ ಮಳೆಗೆ ಗ್ರಾಮದ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯಿತು   

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಸಂಡೂರು, ಕೊಟ್ಟೂರಿನಲ್ಲಿ ಮಂಗಳವಾರ ಬಿರುಗಾಳಿ ಗುಡುಗು ಸಹಿತ ಮಳೆಯಾಗಿದ್ದು, ಕೆಲವೆಡೆ ಮನೆಯ ಶೀಟುಗಳು ಹಾರಿ ಹೋದರೆ, ಮತ್ತೆ ಕೆಲವು ಕಡೆ ಬುಡಸಮೇತ ಮರ ಉರುಳಿ ಬಿದ್ದಿವೆ.

ಸಂಡೂರು ತಾಲ್ಲೂಕಿನ ಎಸ್‌. ಓಬಳಾಪುರದಲ್ಲಿ ಬಿರುಗಾಳಿ ಮಳೆಗೆ 15, ದೇವರ ಬುಡ್ಡೇನಹಳ್ಳಿಯಲ್ಲಿ ಎರಡು ಮನೆಗಳ ಶೀಟುಗಳು ಹಾರಿ ಹೋಗಿವೆ. ಸತತವಾಗಿ ಒಂದು ಗಂಟೆ ಬಿರುಸಿನ ಮಳೆಯಾಗಿದ್ದರಿಂದ ಹಳ್ಳಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರು ಬಂದಿದೆ.

‘ತಿಪ್ಪನಮರಡಿಯ ಬಳಿಯ ಹೊಲದಲ್ಲಿ ಸಿಡಿಲು ಬಡಿದು ಒಡೇರಹಳ್ಳಿಯ ಸಣ್ಣ ಬೊಮ್ಮಯ್ಯ ಎಂಬ ಕುರಿಗಾಹಿಯ 3 ಕುರಿ ಹಾಗೂ 6 ಮೇಕೆಗಳು ಮೃತಪಟ್ಟಿವೆ’ ಎಂದು ಕಂದಾಯ ನಿರೀಕ್ಷಕ ಯರಿಸ್ವಾಮಿ ತಿಳಿಸಿದರು.

ADVERTISEMENT

ಸಂಡೂರು ಪಟ್ಟಣ, ತಾಲ್ಲೂಕಿನ ತಾರಾನಗರ, ಗೌರಿಪುರ, ಚೋರುನೂರಿನಲ್ಲಿ ಗುಡುಗು ಸಹಿತ ಕೆಲ ನಿಮಿಷ ಮಳೆಯಾಗಿದೆ.

ಕೊಟ್ಟೂರು ವರದಿ:

ಬಿರುಗಾಳಿಗೆ ತಾಲ್ಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಹಲವೆಡೆ ಮರಗಳು ಬುಡಸಮೇತ ಉರುಳಿ ಬಿದ್ದಿವೆ. ಗ್ರಾಮದ ಪೂಜಾರ ಮಂಜುನಾಥ ಎಂಬುವರ ಮನೆಯ ಮುಂದಿನ ಹೆಂಚಿನ ಮೇಲೆ ಮರ ಉರುಳಿ ಬಿದ್ದಿದೆ.

ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ, ಹುಲಿಕೆರೆ, ಹೊಸಹಳ್ಳಿ, ಆಲೂರು ಗ್ರಾಮಗಳಲ್ಲಿ ಮಳೆಯಾಗಿದ್ದರಿಂದ ವಾತಾವರಣ ತಂಪಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.