
ಹೊಸಪೇಟೆ (ವಿಜಯನಗರ): ಇಲ್ಲಿನ ಕೊಟ್ಟೂರುಸ್ವಾಮಿ ಮಠ ಬಳಿಯ ಮೇನ್ ಬಜಾರ್ನಲ್ಲಿ ಶುಕ್ರವಾರ ಸರ್ವಧರ್ಮ ರಥೋತ್ಸವ ವಿಶಿಷ್ಟವಾಗಿ ನೆರವೇರಿತು.
ಭಗವದ್ಗೀತೆ, ಬೈಬಲ್, ಕುರ್ಆನ್, ಸಿದ್ಧಾಂತ ಶಿಖಾಮನಿ ಸೇರಿ ವಿಶ್ವದ ಎಲ್ಲಾ ಧರ್ಮಗಳ ಗ್ರಂಥಗಳನ್ನು ತೇರಿನಲ್ಲಿ ಉತ್ಸವಮೂರ್ತಿ ಇಡುವ ಸ್ಥಳದಲ್ಲಿ ಇಟ್ಟು ಪೂಜಿಸಿ, ಉತ್ಸವ ನಡೆಸಲಾಯಿತು.
ಕೊಟ್ಟೂರು ಸ್ವಾಮಿಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಸಂಗನಬಸವ ಸ್ವಾಮೀಜಿ ಅವರು 9 ವರ್ಷಗಳ ಹಿಂದೆ ಸರ್ವಧರ್ಮ ರಥೋತ್ಸವವನ್ನು ಆರಂಭಿಸಿದ್ದರು.
‘ಈ ಮೂಲಕ ಮಠ ಯಾವುದೇ ಜಾತಿ, ಧರ್ಮ, ಜನಾಂಗಗಳಿಗೆ ಸೀಮಿತವಾಗಿಲ್ಲ, ಮಠವೆಂದರೆ ಸರ್ವ ಜನಾಂಗದ ಶಾಂತಿಯ ತಾಣ ಎಂಬ ಸಂದೇಶವನ್ನು ಸಾರಿದ್ದರು. 4 ವರ್ಷಗಳ ಹಿಂದೆ ಲಿಂಗೈಕ್ಯರಾದ, ಅವರು ಹುಟ್ಟುಹಾಕಿದ ಪರಂಪರೆಯನ್ನು ಇಂದಿನ ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮುಂದುವರಿಸಿದ್ದಾರೆ.
ಮೇನ್ ಬಜಾರಿಗೆ ಹೊಂದಿಕೊಂಡಿರುವ ಮಠದ ಹೆಬ್ಬಾಗಿಲಿನಿಂದ ಆರಂಭವಾದ ರಥೋತ್ಸವ ಪಾದಗಟ್ಟಿ ಆಂಜನೇಯ ದೇವಸ್ಥಾನದವರೆಗೆ ಜರುಗಿತು. ರಥೋತ್ಸವದಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು ಸೇರಿ ವಿವಿಧ ಹಲವಾರು ಸಮುದಾಯದವರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.