ಹೊಸಪೇಟೆ: ಸಾಫ್ಟ್ವೇರ್ ಮೇಲ್ದರ್ಜೆಗೇರಿಸುವ ಕೆಲಸ ಪ್ರಗತಿಯಲ್ಲಿ ಇರುವುದರಿಂದ ನಗರದ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್ಬಿಐ) ಪ್ರಧಾನ ಶಾಖೆ ಹಾಗೂ ಉಪಶಾಖೆಗಳಲ್ಲಿ ಮೂರು ದಿನಗಳಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.
ಮೂರು ದಿನಗಳಿಂದ ಗ್ರಾಹಕರು ಬ್ಯಾಂಕಿಗೆ ಬಂದು ಯಾವುದೇ ಕೆಲಸ ಆಗದೆ ಹಿಂತಿರುಗುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬರುವವರು, ವ್ಯಾಪಾರ ವಹಿವಾಟು ನಡೆಸುವವರಿಗೆ ಇದರಿಂದ ತೀವ್ರ ತೊಂದರೆ ಉಂಟಾಗುತ್ತಿದೆ.
‘ನಿತ್ಯವೂ ಚೆಕ್ ಮೂಲಕವೇ ವ್ಯವಹಾರ ನಡೆಸುತ್ತೇನೆ. ಆದರೆ, ಮೂರು ದಿನಗಳಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಸಾಫ್ಟ್ವೇರ್ ಕೆಲಸ ಮಾಡುತ್ತಿಲ್ಲ ಎಂದು ತಿಳಿಸುತ್ತಿದ್ದಾರೆ. ತಾಂತ್ರಿಕ ದೋಷವಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅದು ಬಿಟ್ಟು ಗ್ರಾಹಕರಿಗೆ ಸೇವೆ ಒದಗಿಸದೆ ವಾಪಸ್ ಕಳಿಸುವುದು ಎಷ್ಟರಮಟ್ಟಿಗೆ ಸರಿ’ ಎಂದು ಬ್ಯಾಂಕಿನ ಗ್ರಾಹಕ ರಮೇಶ ಪ್ರಶ್ನಿಸಿದರು.
ಈ ಕುರಿತು ಬ್ಯಾಂಕಿನ ಪ್ರಧಾನ ಶಾಖೆಯ ವ್ಯವಸ್ಥಾಪಕ ಅಭಯ್ ಕುಮಾರ್ ಸಿಂಗ್ ಅವರನ್ನು ‘ಪ್ರಜಾವಾಣಿ ಸಂಪರ್ಕಿಸಿದಾಗ, ‘ಮುಂಬೈನ ಕೇಂದ್ರ ಕಚೇರಿಯಲ್ಲಿ ಸಾಫ್ಟ್ವೇರ್ ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಕೆಲಸ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸರಿ ಹೋದ ನಂತರ ಮೊದಲಿನಂತೆ ಎಲ್ಲ ಸೇವೆಗಳು ಆರಂಭವಾಗಲಿವೆ. ಬ್ಯಾಂಕಿನ ವಹಿವಾಟಿಗೆ ಸಂಬಂಧಿಸಿದಂತೆ ತುರ್ತು ಸೇವೆ ಬೇಕಿದ್ದರೆ ಗ್ರಾಹಕರು ಬ್ಯಾಂಕಿಗೆ ಬಂದು ತಿಳಿಸಿದರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.