ADVERTISEMENT

ಎರಡನೇ ಹಂತದ ಬೆಳೆ ನಷ್ಟ ಸಮೀಕ್ಷೆ ಆರಂಭ: ಆರ್‌. ಅಶೋಕ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 6:47 IST
Last Updated 17 ಸೆಪ್ಟೆಂಬರ್ 2020, 6:47 IST
ಕಂದಾಯ ಸಚಿವ ಆರ್.ಅಶೋಕ
ಕಂದಾಯ ಸಚಿವ ಆರ್.ಅಶೋಕ   

ಹೊಸಪೇಟೆ: ‘ಸತತವಾಗಿ ಸುರಿಯುತ್ತಿರುವ ಮಳೆಗೆ ರಾಜ್ಯದ ನಾನಾ ಭಾಗಗಳಲ್ಲಿ ನೆರೆ ಬಂದು ಅಪಾರ ಬೆಳೆ ನಷ್ಟವಾಗಿದೆ. ಅದರ ಬಗ್ಗೆ ಎರಡನೇ ಹಂತದ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ನಷ್ಟ ಅನುಭವಿಸಿದವರಿಗೆ ಪರಿಹಾರ ವಿತರಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಭರವಸೆ ನೀಡಿದರು.

ಗುರುವಾರ ಇಲ್ಲಿನ ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿ ಗೃಹದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಮೊದಲನೇ ಹಂತದ ಸಮೀಕ್ಷೆ ಪೂರ್ಣಗೊಂಡಿದ್ದು, ಈಗಾಗಲೇ ಪರಿಹಾರ ವಿತರಿಸಲಾಗುತ್ತಿದೆ. ಆದಷ್ಟು ಶೀಘ್ರ ಎರಡನೇ ಹಂತದ ಬೆಳೆ ನಷ್ಟದ ಸಮೀಕ್ಷೆ ಪೂರ್ಣಗೊಳಿಸಿ, ಸಮಸ್ಯೆಯ ಸುಳಿಗೆ ಸಿಲುಕಿದವರಿಗೆ ಪರಿಹಾರ ವಿತರಿಸಲಾಗುವುದು. ಮಳೆಗೆ ಮನೆ ಬಿದ್ದರೆ ಅಂತಹವರಿಗೆ ಪೂರ್ಣ ಪರಿಹಾರ ಕೊಡಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ನಾಲ್ಕೈದು ತಿಂಗಳಿಂದ ಪೆನ್ಶನ್‌ ಬರುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿವೆ. ಅದನ್ನು ಸರಿಪಡಿಸಬೇಕು. ಅಂಚೆ ಕಚೇರಿ ಬದಲಾಗಿ ನೇರವಾಗಿ ಜನರ ಬ್ಯಾಂಕ್‌ ಖಾತೆಗೆ ಪೆನ್ಶನ್‌ ಹಣ ಜಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ’ ಎಂದರು.

‘ಬಳ್ಳಾರಿಯಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಬರುತ್ತಿರುವುದು ಒಳ್ಳೆಯ ಸಂಗತಿ. ಆದರೆ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಬರುತ್ತಿವೆ. ಕೋವಿಡ್‌ಗೆ ಖರ್ಚಾದ ಹಣದ ಬಗ್ಗೆ ಪೈಸೆ ಪೈಸೆ ಲೆಕ್ಕ ಇಡಬೇಕು’ ಎಂದು ಸೂಚಿಸಿದರು.

ಸಂಡೂರು ಶಾಸಕ ಈ. ತುಕಾರಾಂ, ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.