
ಕಂಪ್ಲಿ: ‘ಮನುಷ್ಯ ಏನೆಲ್ಲಾ ಕಂಡುಹಿಡಿದರೂ, ಎಷ್ಟೇ ಹಣ ಸಂಪತ್ತನ್ನು ಗಳಿಸಿದರೂ ಅವನ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಪರೋಪಕಾರ, ಸಹನೆ, ತಾಳ್ಮೆ, ಸೌಹಾರ್ದಯುತ ಜೀವನ ನಡೆಸುವ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅರ್ಥಪೂರ್ಣ ಬದುಕು ಸಾಗಿಸಲು ಸಾಧ್ಯ’ ಎಂದು ಜೈನ ಸಂತ ಮುಕ್ತಿಪ್ರಭ ಸಾಗರಶ್ರೀ ತಿಳಿಸಿದರು.
ಇಲ್ಲಿನ ಶ್ರೀಮುನಿಸುವ್ರತ್ಸ್ವಾಮಿ ಮಂದಿರದಿಂದ ಆಂಧ್ರಪ್ರದೇಶದ ಆದೋನಿ ಬಳಿಯ ಪೆದ್ದತುಂಬಳಂ ಗ್ರಾಮದ ಪಾರ್ಶ್ವಮಣಿ ದೇವಸ್ಥಾನದಲ್ಲಿ ಫೆ.3ರಂದು ಆರಂಭವಾಗುವ ಪಾದಯಾತ್ರೆ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ನಡೆದ ಜೈನ ಸಂತರ ಮೆರವಣಿಗೆ ಬಳಿಕ ಮಾತನಾಡಿದ ಅವರು, ಪರೋಪಕಾರ ಜೀವನ ಸಾಗಿಸುವಂತೆ ಪ್ರೇರೇಪಿಸಲು ಪ್ರಸ್ತುತ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಜೈನ ಗುರುಗಳಾದ ಮನಿಪ್ರಭಾ ಸಾಗರಶ್ರೀ, ಸುಲೋಚನಾಶ್ರೀ, ಸುಲಕ್ಷಣಾಶ್ರೀ ಸೇರಿ 28 ಜೈನ ಸಂತರು ಪಾಲ್ಗೊಂಡಿದ್ದರು.
ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಕಾರ್ಯದರ್ಶಿ ಪಾರಸ್ಮಲ್ ಹುಂಡಿಯಾ, ಪ್ರಮುಖರಾದ ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಫತೇಕುಮಾರ್ ಭಾಪ್ಣ, ಕಲಾಪೂರ್ಣ ಯುವಕ ಮಂಡಲ, ಪದ್ಮಾವತಿ ಬಹು ಮಂಡಲ, ನೌಕಾರ್ ಮಾಲೀಕ ಮಂಡಲ್ ಇದ್ದರು.
ಮುನಿಸುವ್ರತ್ ಸ್ವಾಮಿ ಮಂದಿರದಲ್ಲಿ ಭಜನೆ ಸೇರಿದಂತೆ ವಿವಿಧ ಜೈನ ಸಂಪ್ರದಾಯದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.