ADVERTISEMENT

‘ಸಂಶೋಧನಾ ಕ್ಷೇತ್ರಕ್ಕೆ ಶಂಬಾ ಜೋಶಿ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 14:00 IST
Last Updated 4 ಜನವರಿ 2023, 14:00 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಶಂಬಾ ಜೋಶಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಶಂಬಾ ಜೋಶಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ‘ಸಂಶೋಧನಾ ಕ್ಷೇತ್ರಕ್ಕೆ ಶಂಬಾ ಜೋಶಿಯರವರ ಕೊಡುಗೆ ಅಪಾರ’ ಎಂದು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಎಚ್‌. ಶಶಿಕಲಾ ತಿಳಿಸಿದರು.

ಶಂಬಾ ಜೋಶಿ ಅಧ್ಯಯನ ಪೀಠದಿಂದ ಅವರ ಜನ್ಮದಿನದ ಅಂಗವಾಗಿ ಬುಧವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ‘ಶಂಬಾ ಜೋಶಿಯವರ ಭಾಷಿಕ ಅಧ್ಯಯನದ ಸ್ವರೂಪ ಹಾಗೂ ಕನ್ನಡ ಸಂಶೋಧನೆಯ ಇತ್ತೀಚಿನ ಒಲವುಗಳು’ ಕುರಿತು ಮಾತನಾಡಿದರು.

ಜೋಶಿಯವರು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅಧ್ಯಯನದ ವಿಧಾನಗಳನ್ನು ಅನುಸರಿಸುವ ಮೂಲಕ ತಮ್ಮದೆ ಆದ ನೆಲೆಕಟ್ಟಿಕೊಟ್ಟಿದ್ದರು. ಸಂಶೋಧನೆಯ ವಸ್ತುವಿನಿಂದಲೆ ಅದರ ನಿಯಮವನ್ನು ಕಂಡುಕೊಂಡಿದ್ದರು. ಭಾಷೆ ಜನರ ವ್ಯಕ್ತಿತ್ವ ತೋರಿಸುತ್ತದೆ. ಭಾಷೆಯ ಮೇಲಿನ ಅಭಿಮಾನ ಸಂಶೋಧನೆಯನ್ನು ವಿಸ್ತರಿಸುತ್ತಾ ಹೋಗುತ್ತದೆ ಎಂದು ಹೇಳಿದರು.

ADVERTISEMENT

‘ಸಮುದಾಯದ ಚರಿತ್ರೆ ಮತ್ತು ಶಂಬಾ ಜೋಶಿ ಸಂಸ್ಕೃತಿ ಚಿಂತನೆ’ ಕುರಿತು ಮಾತನಾಡಿದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಎನ್. ಚಿನ್ನಸ್ವಾಮಿ ಸೋಸಲೆ, ಶಂಬಾ ಅವರ ಮುಂದೆ ಅನೇಕ ಸವಾಲುಗಳಿದ್ದರೂ ಅವುಗಳನ್ನು ಅವರು ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸಿದ್ದರು. ಅವರ ಚಿಂತನೆಗಳು ವಸ್ತುನಿಷ್ಠವಾಗಿದ್ದವು ಎಂದರು.

ಕುಲಪತಿ ಪ್ರೊ. ಸ.ಚಿ. ರಮೇಶ, ಪ್ರತಿ ವರ್ಷ ಶಂಬಾ ಜೋಶಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಈ ರೀತಿಯ ಉಪನ್ಯಾಸ ಹಮ್ಮಿಕೊಳ್ಳುವ ಮೂಲಕ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸಲಾಗುತ್ತದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ.ಎ ಸುಬ್ಬಣ್ಣ ರೈ, ಅಧ್ಯಯನ ಪೀಠದ ಸಂಚಾಲಕ ವಿರೂಪಾಕ್ಷಿ ಪೂಜಾರಹಳ್ಳಿ, ಶ್ವೇತಾ ಭಸ್ಮೆ, ಎಂ. ಸೌಮ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.