ADVERTISEMENT

ಸಿಂಗಟಾಲೂರು ನಿರ್ವಹಣೆಗೆ ಅನುದಾನ ನೀಡಿ: ಶಾಸಕ ಕೃಷ್ಣನಾಯ್ಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 6:29 IST
Last Updated 12 ಡಿಸೆಂಬರ್ 2025, 6:29 IST
ಶಾಸಕ ಕೃಷ್ಣನಾಯ್ಕ
ಶಾಸಕ ಕೃಷ್ಣನಾಯ್ಕ   

ಹೂವಿನಹಡಗಲಿ : ‘ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ದಶಕ ಕಳೆದ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿಯುತ್ತಿಲ್ಲ. ಕಾಲುವೆಗೆ ಸ್ವಾಧೀನಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಭೂ ಪರಿಹಾರ ನೀಡಿಲ್ಲ. ಯೋಜನೆಯ ಸಮರ್ಪಕ ನಿರ್ವಹಣೆಗೆ ತಕ್ಷಣ ಅನುದಾನ ನೀಡಬೇಕು’ ಎಂದು ಶಾಸಕ ಕೃಷ್ಣನಾಯ್ಕ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಯೋಜನೆಯಿಂದ ಹೂವಿನಹಡಗಲಿ ತಾಲ್ಲೂಕಿನ 35,791 ಎಕರೆಗೆ ನೀರು ಹರಿಸಬೇಕಿತ್ತು. ಆದರೆ ಅರ್ಧದಷ್ಟು ಭೂಮಿಗೂ ನೀರು ಹರಿಯುತ್ತಿಲ್ಲ. ಬ್ಯಾರೇಜ್ ನಿರ್ವಹಣೆ, 136 ಕಿ.ಮೀ ಕಾಲುವೆಗಳ ನಿರ್ವಹಣೆಗೆ ಈವರೆಗೂ ಅನುದಾನ ನೀಡಿಲ್ಲ. ಹೆಚ್ಚುವರಿ ಮೋಟಾರ್, ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ. ಕೆರೆ ತುಂಬಿಸುವ ಯೋಜನೆಯ 150 ಕಿ.ಮೀ  ಪೈಪ್ ಲೈನ್ ಜಾಲವೂ ಸರಿಯಾಗಿಲ್ಲ. ಪೈಪ್ ಲೈನ್ ದುರಸ್ತಿಗೆ ₹60 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದರೆ ₹5 ಕೋಟಿ ಮಾತ್ರ ಬಿಡುಗಡೆಗೊಳಿಸಲಾಗಿದೆ. ಯೋಜನೆಗಳ ವಿದ್ಯುತ್ ಬಿಲ್ ₹28.94 ಕೋಟಿ ಬಾಕಿ ಇರುವುದರಿಂದ ಜೆಸ್ಕಾಂನವರು ಆಗಾಗ ವಿದ್ಯುತ್ ಸಂಪರ್ಕ ಕಡಿತಗೊಳಿತ್ತಿದ್ದಾರೆ’ ಎಂದು ವಿವರಿಸಿದರು.

‘ಕಾಲುವೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ 768 ಎಕರೆಗೆ ಭೂ ಪರಿಹಾರ ನೀಡಬೇಕಿದೆ. ವಿಶೇಷ ಭೂಸ್ವಾಧೀನ ಕಚೇರಿ ಇದ್ದರೂ ಕಾಯಂ ಅಧಿಕಾರಿ ಇಲ್ಲ. ಜೀವನಕ್ಕೆ ಆಸರೆಯಾಗಿದ್ದ ಭೂಮಿ ಕಳೆದುಕೊಂಡಿರುವ ರೈತರು ಪರಿಹಾರಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು’ ಎಂದು ಪ್ರಶ್ನಿಸಿದರು.

ADVERTISEMENT

ಕಾನೂನು ಸಚಿವ ಎಚ್.ಕೆ.ಪಾಟೀಲ್ ಉತ್ತರಿಸಿ, ‘ಯೋಜನೆಯಿಂದ 2,65,229 ಎಕರೆಗೆ ನೀರು ಹರಿಸಬೇಕಿದ್ದು, ಇನ್ನೂ ವಿಸ್ತರಣೆಯ ಚಿಂತನೆ ನಡೆದಿದೆ. ಗದಗ ಭೀಷ್ಮ ಕೆರೆ, ಡಂಬಳ ಕೆರೆಗೆ ನೀರು ಹರಿಯುತ್ತಿದೆ. ₹8.38 ಕೋಟಿ ಭೂ ಪರಿಹಾರದ ಬಾಕಿ ಬಿಡುಗಡೆಗೆ ಕ್ರಮ ವಹಿಸುತ್ತೇವೆ. ಕೆಲ ಲೋಪದೋಷದಿಂದ ಸಮಸ್ಯೆ ಆಗಿರುವುದು ನಿಜ. ಶಾಸಕರಾದ ಕೃಷ್ಣನಾಯ್ಕ, ಜಿ.ಎಸ್.ಪಾಟೀಲರೊಂದಿಗೆ ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿ, ಪರಿಹಾರ ಕಂಡುಕೊಳ್ಳೋಣ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.