ಹೊಸಪೇಟೆ(ವಿಜಯನಗರ): ‘ನಗರದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಹೊಸ ಮಾರ್ಗಸೂಚಿ ಇಷ್ಟರಲ್ಲೇ ಹೊರಡಿಸಲಾಗುವುದು’ ಎಂದು ಡಿವೈಎಸ್ಪಿ ವಿ. ರಘುಕುಮಾರ ತಿಳಿಸಿದರು.
‘ಈಗಾಗಲೇ ಈ ಸಂಬಂಧ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ, ಪಾರ್ಕಿಂಗ್ ನಿಯಮ ಜಾರಿಗೆ ತರಲಾಗುವುದು’ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ನಗರ ವ್ಯಾಪ್ತಿಯಲ್ಲಿ 35 ಸಾವಿರ ದ್ವಿಚಕ್ರ, 15 ಸಾವಿರ ನಾಲ್ಕು ಚಕ್ರ ಹಾಗೂ 2 ಸಾವಿರ ಆಟೊ ರಿಕ್ಷಾಗಳಿವೆ. ವಿಜಯನಗರ ಜಿಲ್ಲೆ ಘೋಷಣೆ ಆಗಿರುವುದರಿಂದ ಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಭವಿಷ್ಯದಲ್ಲಿ ಸಂಚಾರ ಅಸ್ತವ್ಯಸ್ತವಾಗದಂತೆ ತಡೆಯುವುದಕ್ಕಾಗಿ ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
‘ಸಂಚಾರ ವ್ಯವಸ್ಥೆಗೆ ಅಗತ್ಯವಿರುವ ಸಲಕರಣೆಗೆ ನಗರಸಭೆಯಿಂದ 45 ಲಕ್ಷ ಅನುದಾನ ಬಿಡುಗಡೆಯಾಗಿದೆ. ನಗರಸಭೆಯ ಸಹಕಾರದೊಂದಿಗೆ ಕಾಲೇಜು ರಸ್ತೆ, ಮಾರುಕಟ್ಟೆ ರಸ್ತೆ ಹಾಗೂ ಬಸ್ ನಿಲ್ದಾಣ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.