ADVERTISEMENT

ರೈಲ್ವೆ ಕಾಮಗಾರಿ ಅನುಮತಿಗೆ ಜಿಲ್ಲಾಧಿಕಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 9:44 IST
Last Updated 18 ನವೆಂಬರ್ 2018, 9:44 IST
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ ನೇತೃತ್ವದಲ್ಲಿ ಪದಾಧಿಕಾರಿಗಳು ಭಾನುವಾರ ಸಂಸದ ವಿ.ಎಸ್‌.ಉಗ್ರಪ್ಪನವರಿಗೆ ಮನವಿ ಸಲ್ಲಿಸಿದರು
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ ನೇತೃತ್ವದಲ್ಲಿ ಪದಾಧಿಕಾರಿಗಳು ಭಾನುವಾರ ಸಂಸದ ವಿ.ಎಸ್‌.ಉಗ್ರಪ್ಪನವರಿಗೆ ಮನವಿ ಸಲ್ಲಿಸಿದರು   

ಹೊಸಪೇಟೆ:‘ಕೊಟ್ಟೂರು–ಹೊಸಪೇಟೆ ನಡುವೆ ಶೀಘ್ರ ಪ್ರಯಾಣಿಕರ ರೈಲು ಓಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು’ ಎಂದು ಸಂಸದ ವಿ.ವಿಸ್‌. ಉಗ್ರಪ್ಪ ಭರವಸೆ ನೀಡಿದರು.

ಈ ಸಂಬಂಧ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ ಭಾನುವಾರ ಇಲ್ಲಿ ಉಗ್ರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಅದಕ್ಕೆ ಉಗ್ರಪ್ಪನವರು ಮೇಲಿನಂತೆ ಪ್ರತಿಕ್ರಿಯಿಸಿದರು.

‘ಬಳ್ಳಾರಿಯಲ್ಲಿ ಇದೇ 19ರಂದು ನಡೆಯಲಿರುವ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುವೆ. ನಂತರ ಕಾಮಗಾರಿ ಆರಂಭಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

ಯಮುನೇಶ ಅವರು ತಮ್ಮ ಮನವಿಯಲ್ಲಿ,‘ಈ ಮಾರ್ಗದಲ್ಲಿ ಅಂಡರ್‌ಪಾಸ್‌, ಲೆವೆಲ್‌ ಕ್ರಾಸಿಂಗ್‌ ಕಾಮಗಾರಿ ಪೂರ್ಣಗೊಳಿಸಲು ಅನುಮತಿ ಕೋರಿ ರೈಲ್ವೆ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿ ಹಲವು ತಿಂಗಳು ಕಳೆದಿವೆ. ಆದರೆ, ಇದುವರೆಗೆ ಅನುಮತಿ ನೀಡಿಲ್ಲ. ಅನುಮತಿ ಕೊಟ್ಟರೆ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ರೈಲ್ವೆ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. ಅದಾದ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗ ಪರಿಶೀಲಿಸಿ, ಪ್ರಯಾಣಿಕರ ರೈಲು ಓಡಿಸಲು ದಿನಾಂಕ ನಿಗದಿಪಡಿಸುವರು. ಕಾಮಗಾರಿ ಆರಂಭಕ್ಕೆ ಜಿಲ್ಲಾಧಿಕಾರಿ ಶೀಘ್ರ ಅನುಮತಿ ಕೊಡಲು ಸೂಚಿಸಬೇಕು’ ಎಂದು ಆಗ್ರಹಿಸಿದರು.

‘ಬಳ್ಳಾರಿ, ರಾಯದುರ್ಗ, ಪಾವಗಡ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಮಾರ್ಗ ಆರಂಭಗೊಂಡರೆ ಗದಗ, ವಿಜಯಪುರ, ಕೊಪ್ಪಳ, ಹೊಸಪೇಟೆ, ಬಳ್ಳಾರಿಯಿಂದ ಬೆಂಗಳೂರಿನ ಪ್ರಯಾಣದ ಅವಧಿ ಕಡಿಮೆ ಆಗುತ್ತದೆ’ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಗುಜ್ಜಲ್ ನಾಗರಾಜ್, ಎಚ್.ಮಹೇಶ್, ಮಂಜುನಾಥ, ವಾಲ್ಮೀಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.