ಹಗರಿಬೊಮ್ಮನಹಳ್ಳಿ: ‘ಹಸ್ತ ರೇಖೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಇಲ್ಲ. ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ’ ಎಂದು ಹುನಗುಂದ ವಿ.ಎಂ.ಕಾಲೇಜ್ ಉಪನ್ಯಾಸಕಿ ನಾಗರತ್ನಾ ಅಶೋಕ ಭಾವಿಕಟ್ಟಿ ಹೇಳಿದರು.
ಪಟ್ಟಣದ ಪಂಚಮಸಾಲಿ ಭವನದಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಲಿಕೆಯಲ್ಲಿ ಸಾಧಕರು ಪ್ರೇರಣೆಯಾಗಬೇಕು, ಸಮರ್ಪಣಾ ಭಾವ ಮತ್ತು ಸಹನೆ ಇರಬೇಕು, ಆತ್ಮಬಲ ಹೊಂದಿರಬೇಕು’ ಎಂದು ಸಲಹೆ ನೀಡಿದರು.
ಶಾಸಕ ಕೆ.ನೇಮರಾಜ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, ‘ರಾಜ್ಯದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾತಿ ಗಣತಿಯಲ್ಲಿ ಗೋಲ್ಮಾಲ್ ನಡೆದಿದೆ. ಸಮೀಕ್ಷೆಯಲ್ಲೂ ರಾಜಕಾರಣ ನಡೆಯುತ್ತಿರುವುದು ವಿಷಾದನೀಯ’ ಎಂದರು.
‘ಪಟ್ಟಣದ ಹಳೇ ಊರಿನ ವೃತ್ತದಲ್ಲಿ ₹50 ಲಕ್ಷ ಅಂದಾಜು ಮೊತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಕಂಚಿನ ಪುತ್ಥಳಿ ನಿರ್ಮಿಸಲಾಗುವುದು, ಕೊಟ್ಟೂರಿನ ಚಪ್ಪರದಳ್ಳಿಯಲ್ಲಿ ಅಪೂರ್ಣಗೊಂಡಿರುವ ಪಂಚಮಸಾಲಿ ಸಮುದಾಯ ಭವನದ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು’ ಭರವಸೆ ನೀಡಿದರು.
ಸಮಾಜದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ, ಜಿ.ಪಿ.ಪಾಟೀಲ್, ಹನಸಿ ಸಿದ್ದೇಶ್, ಬೊಪ್ಪಕಾನ ಕುಮಾರಸ್ವಾಮಿ, ಕಿಚಿಡಿ ಕೊಟ್ರೇಶ್ ಮಾತನಾಡಿದರು. ಲೋಕಾಯುಕ್ತ ಸಿಪಿಐ ಎಚ್.ಗುರುಬಸವರಾಜ ಸೇರಿದಂತೆ ವಿಶೇಷ ಸಾಧನೆ ಮಾಡಿದ ಐದು ಜನರಿಗೆ, ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 39 ಹಾಗೂ ಪಿಯುಸಿಯ 25 ವಿದ್ಯಾರ್ಥಿಗಳು ಮತ್ತು 12 ಜನ ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
ಇಮ್ಮಡಿ ಮಹಾಂತ ಸ್ವಾಮೀಜಿ, ನಿರಂಜನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಜುನಾಥಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಸವರಾಜ ದಿಂಡೂರು, ಅಕ್ಕಿ ಶಿವಕುಮಾರ, ಬೊಮ್ಮಸಾಗರ ಮಲ್ಲಣ್ಣ, ವೈ.ಮಲ್ಲಿಕಾರ್ಜುನ, ಮಂಜುಳಾ ವಿರೂಪಾಕ್ಷಗೌಡ, ಶಾರದಾ ಮಂಜುನಾಥ, ಸೊನ್ನದ ಗುರುಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.