ಹೊಸಪೇಟೆ(ವಿಜಯನಗರ): ಇಲ್ಲಿನ ನಗರಸಭೆಯ ಪೌರ ಕಾರ್ಮಿಕರಿಗೆ ಪ್ರತಿದಿನ ಬೆಳಿಗ್ಗೆ ಉಪಾಹಾರ ಕೊಡುವ ಕಾರ್ಯಕ್ಕೆ ಗುರುವಾರ ನಗರದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ ಚಾಲನೆ ನೀಡಿದರು.
ನಗರದ ಶ್ರೀರಾಮುಲು ಉದ್ಯಾನದ ಬಳಿ ಗುರುವಾರ ಪೌರಕಾರ್ಮಿಕರಿಗೆ ಉಪಾಹಾರ ಬಡಿಸುವುದರ ಮೂಲಕ ಚಾಲನೆ ಕೊಟ್ಟರು. ಮೊದಲ ದಿನ ಮೊಟ್ಟೆ, ಪುಲಾವ್ ನೀಡಲಾಯಿತು. ಬಳಿಕ ಮಾತನಾಡಿದ ಅಧ್ಯಕ್ಷೆ ಸುಂಕಮ್ಮ, ಪ್ರತಿದಿನ ಬೆಳಿಗ್ಗೆ ಐದು ಗಂಟೆಯಿಂದ ಪೌರ ಕಾರ್ಮಿಕರು ನಗರದ ಸ್ವಚ್ಛತೆಯ ಕೆಲಸದಲ್ಲಿ ತೊಡಗುತ್ತಾರೆ. ಅವರಿಗೆ ಉಪಾಹಾರ ಕೊಡಬೇಕೆಂಬ ನಿಯಮ ಇದೆ. ಈಗ ಅದನ್ನು ಜಾರಿಗೆ ತರಲಾಗಿದೆ. ಉಪಾಹಾರ ಪೂರೈಸುವ ಕೆಲಸವನ್ನು ಹೊರಗುತ್ತಿಗೆ ಮೇಲೆ ವಹಿಸಲಾಗಿದೆ. ನಗರದ ನಾಲ್ಕು ಸರ್ಕಲ್ಗಳಲ್ಲಿ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಮೇಸ್ತ್ರಿಗಳು ನಾಲ್ಕೂ ವೃತ್ತಗಳಲ್ಲಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿರುವ ಸ್ಥಳಕ್ಕೆ ಉಪಾಹಾರ ತಲುಪಿಸುತ್ತಾರೆ ಎಂದರು.
ಪ್ರತಿ ದಿನ ಮೊಟ್ಟೆ ನೀಡಲಾಗುತ್ತದೆ. ನಿತ್ಯ ಬೇರೆ ಬೇರೆ ಉಪಾಹಾರ ಕೊಡಲಾಗುತ್ತದೆ. ಪ್ರತಿ ಭಾನುವಾರ ಮಾಂಸದೂಟ ನೀಡಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷ ಎಲ್.ಎಸ್. ಆನಂದ್, ಆರೋಗ್ಯ ಅಧಿಕಾರಿ ವಿರೂಪಾಕ್ಷ, ಪೌರಕಾರ್ಮಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.