ADVERTISEMENT

ಹೊಸತನ ಕಂಡ ಕುಂಬಾರರು

ನೆರವಿಗೆ ಬಂತು ಕೌಶಲ ತರಬೇತಿ, ಆಧುನಿಕ ತಂತ್ರಜ್ಞಾನ

ವಿ.ಎಂ.ನಾಗಭೂಷಣ
Published 25 ಡಿಸೆಂಬರ್ 2019, 15:50 IST
Last Updated 25 ಡಿಸೆಂಬರ್ 2019, 15:50 IST
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ತರಬೇತಿ ಪಡೆದ ಸಂಡೂರಿನ ಕುಂಬಾರರು
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ತರಬೇತಿ ಪಡೆದ ಸಂಡೂರಿನ ಕುಂಬಾರರು   

ಸಂಡೂರು: ಕೌಶಲ ತರಬೇತಿ, ಆಧುನಿಕ ತಂತ್ರಜ್ಞಾನದ ಸಹಕಾರದಿಂದ ಇಲ್ಲಿನ ಸಾಂಪ್ರದಾಯಿಕ ವೃತ್ತಿನಿರತ ಕುಂಬಾರರು ಅವರ ಕೆಲಸದಲ್ಲಿ ಹೊಸತನ, ವೈವಿಧ್ಯತೆ ಕಂಡುಕೊಂಡಿದ್ದಾರೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ ಪಟ್ಟಣದ ಕುಶಲ ಕಲಾ ಕೇಂದ್ರದಲ್ಲಿ ಕುಂಬಾರರಿಗೆ ನೀಡಿದ ತರಬೇತಿಯ ಫಲವಿದು.

ಒಟ್ಟು 20 ಆಯ್ದ ಕುಂಬಾರರಿಗೆ ಸತತ ಹತ್ತು ದಿನ ತರಬೇತಿ ನೀಡಲಾಗಿದೆ. ವಿದ್ಯುತ್ ಚಾಲಿತ ತಿಗುರಿಯ (ಮಡಕೆ ಮಾಡಲು ಉಪಯೋಗಿಸುವ ಚಕ್ರ) ಸಹಾಯದಿಂದ ಮಣ್ಣಿನಲ್ಲಿ ವೈವಿಧ್ಯಮಯ ವಸ್ತುಗಳನ್ನು ತಯಾರಿಸುವ ಬಗೆ ತಿಳಿಸಿಕೊಡಲಾಯಿತು. ಖಾನಾಪುರದ ತರಬೇತುದಾರ ಚಂದ್ರಕಾಂತ್ ಗೊರಾಲ್ ತರಬೇತಿ ನೀಡಿದರು.

ADVERTISEMENT

ಕುಂಬಾರರಿಗೆ ಮಡಕೆಗಳ ಜೊತೆಯಲ್ಲಿ ವಿವಿಧ ವಿನ್ಯಾಸದ ದೀಪಗಳು, ಹೂಜಿಗಳು, ನೀರು ಸಂಗ್ರಹಿಸುವ ಫ್ಲಾಸ್ಕಗಳು ತಯಾರಿಸುವುದನ್ನು ಕಲಿಸಿದ್ದಾರೆ.

‘ಈ ತರಬೇತಿಯಿಂದ ನಮಗೆ ಬಹಳ ಅನುಕೂಲವಾಗಿದೆ. ಕೇವಲ ಮಡಕೆ ತಯಾರಿಕೆಗೆ ನಾವು ಸೀಮಿತರಾಗಿದ್ದೆವು. ಮಣ್ಣಿನಿಂದ ಅನೇಕ ಬಗೆಯ ವಸ್ತುಗಳನ್ನು ತಯಾರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ’ ಎಂದು ಕುಂಬಾರ ತಿಪ್ಪೇಸ್ವಾಮಿ, ವೆಂಕಟೇಶ್‌ ತಿಳಿಸಿದರು.

‘ಖನಿಜ ಆಧಾರಿತ ಉದ್ಯಮಗಳ ಪ್ರಚಾರ ಚಟುವಟಿಕೆಗಳ ಅಡಿಯಲ್ಲಿ ಕುಂಬಾರ ಸಶಕ್ತೀಕರಣ-ಕೌಶಲ ನವೀಕರಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಯೋಜನೆ ಅಡಿಯಲ್ಲಿ ವೃತ್ತಿ ನಿರತ ಕುಂಬಾರರಿಗೆ ತರಬೇತಿಯ ಜೊತೆಗೆ ವಿದ್ಯುತ್ ಚಾಲಿತ ತಿಗುರಿ, ಮಣ್ಣು ಹದಮಾಡುವ ಯಂತ್ರ ಉಚಿತವಾಗಿ ನೀಡಲಾಗುತ್ತಿದೆ’ ಎಂದು ಆಯೋಗದ ಹುಬ್ಬಳ್ಳಿ ವಿಭಾಗದ ಸಹಾಯಕ ನಿರ್ದೇಶಕ ಕೆ. ಮುರಳೀಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.