
ಸಿರುಗುಪ್ಪ: ಶರೀರದಲ್ಲಿನ ಎಲ್ಲ ಭಾಗಗಳು ಸಹಕಾರ ನೀಡಿದರೆ ಮಾತ್ರ ದೇಹ ಚೈತನ್ಯವಾಗಿರುತ್ತದೆ. ಅದರಂತೆ ವಿವಿಧ ರಂಗಗಳಲ್ಲಿ ನಾಗರಿಕರ ಸಹಕಾರ ಅತಿಮುಖ್ಯ, ವಿಶ್ವಾಸದ ಸಹಕಾರವೇ ಸಮೃದ್ಧಿಯಾಗಿದೆ ಎಂದು ಚರಣಗಿರಿ ಹಾಲ್ವಿ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.
ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬಳ್ಳಾರಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ರಾತ್ರಿ ನಡೆದ ಸೌಹಾರ್ದ ಚಳುವಳಿಯ ರಜತ ಮಹೋತ್ಸವದಲ್ಲಿ ಮಾತನಾಡಿದರು.
ವಿಶ್ವಾಸಾರ್ಹ, ಪಾರದರ್ಶಕತೆ, ಸೇವಾಭಾವದಿಂದ ಇಂದು ಸಹಕಾರ ಸಂಘಗಳು ಬೃಹತ್ ಪ್ರಮಾಣದವರೆಗೆ ಬೆಳೆದಿವೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಮಿತ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿದ ಅವರು, 1905 ಜುಲೈ 8 ರಂದು ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಏಷ್ಯಾದ ಪ್ರಪ್ರಥಮ ಸಹಕಾರಿ ಕೃಷಿ ಪತ್ತಿನ ಸಂಘವನ್ನು ಸ್ಥಾಪಿಸಿದರು. ಗ್ರಾಮೀಣರ ಸಹಕಾರ ಮತ್ತು ರೈತರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿ ಸಹಕಾರಿ ಚಳುವಳಿ ಪ್ರಾರಂಭಿಸಿದರು ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಮಿತ ನಿರ್ದೇಶಕ ಎಚ್.ಜೆ.ಹನುಮಂತಯ್ಯ, ಗುರು ಬಸವ ಮಠದ ಬಸವಭೂಷಣ ಸ್ವಾಮೀಜಿ, ಕಲಬುರಗಿ ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕಲೇ, ಮೇಘಾ ಸೌಹಾರ್ದ ಸಹಕಾರಿ ಬಳ್ಳಾರಿ ಅಧ್ಯಕ್ಷರಾದ ಸತ್ಯನಾರಾಯಣ ಮಾತನಾಡಿದರು.
ಸಹಕಾರಿ ರಜತಮಹೋತ್ಸವ ಅಂಗವಾಗಿ ಏರ್ಪಡಿಸಿದ ಕ್ರೀಡಾ ಕೂಟದಲ್ಲಿ ವಿಜೇತ ತಂಡಕ್ಕೆ ಬಹುಮಾನ ಪ್ರಶಸ್ತಿ ನೀಡಿದರು.
ರಾಜ್ಯ ಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿ ಪಡೆದ ವಿಶ್ವಸಿರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ವಜ್ರಗಿರಿ ನಟರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು. ಸೂರ್ಯಕಲಾ ಟ್ರಸ್ಟ್ ನ ಬಳ್ಳಾರಿ ಅಭಿಷೇಕ್ ತಂಡ ಹಾಗೂ ಅಪ್ಪು ನೃತ್ಯ ಅಕಾಡೆಮಿ, ಸೂಪರ್ ಚಾನಸ್ ಅಕಾಡೆಮಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.
ಪಿ.ಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನ ಗೌಡ, ಸಂಯುಕ್ತ ಸಹಕಾರಿಯ ನಿರ್ದೇಶಕಿ ಶೈಲಜಾ ತಪಲಿ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ, ಲೆಕ್ಕಪರಿಶೋಧಕರ ನಾಗನಗೌಡ, ವಿಷ್ಣು ವಿಲಾಸ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಅನೀಲಕುಮಾರ, ಹಾಸ್ಯ ಕಲಾವಿದ ಜೆ.ನರಸಿಂಹ ಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.