
ಬಳ್ಳಾರಿ: ‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಶಿಷ್ಟರು, ಆದಿವಾಸಿಗಳು, ಬಡವರ ಪರವಾದ ಬಜೆಟ್ ಮಂಡಿಸಿದ್ದಾರೆ. ಇದು ಐತಿಹಾಸಿಕ ಬಜೆಟ್’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಜೆಟ್ನಿಂದ ಜನಸಾಮಾನ್ಯರಿಗೆ ಹೊರೆಯಾಗಿಲ್ಲ. ಹೀಗಿದ್ದರೂ, ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವರು ಬಜೆಟ್ ಅನ್ನು ಟೀಕಿಸಿದ್ದಾರೆ. ಕಳೆದ ರಾಜ್ಯ ಬಜೆಟ್ನಲ್ಲಿ ಇಂಧನ ದರ ಏರಿಸಿದ ಸಿದ್ದರಾಮಯ್ಯ ತಮ್ಮ ಟೀಕೆಗಳ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳಲಿ’ ಎಂದು ಹೇಳಿದರು.
‘ಕೇಂದ್ರ ಸರ್ಕಾರ ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಮಾಡುವುದಾಗಿ ಬಜೆಟ್ನಲ್ಲಿ ಹೇಳಿದೆ. 7 ಹೈಸ್ಪೀಡ್ ರೈಲು ಘೋಷಣೆಯಾಗಿವೆ. ಇದರಿಂದ ರಾಜ್ಯಕ್ಕೂ ಅನುಕೂಲವಾಗಲಿವೆ’ ಎಂದು ತಿಳಿಸಿದರು.
‘16ನೇ ಹಣಕಾಸು ಆಯೋಗ ಮತ್ತು ತೆರಿಗೆಯಲ್ಲಿ ರಾಜ್ಯಕ್ಕೆ ಸೂಕ್ತ ಪಾಲು ಸಿಕ್ಕಿದೆ’ ಎಂದೂ ಅವರು ಹೇಳಿದರು.
‘ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಬಜೆಟ್ನಿಂದ ಹೆಚ್ಚು ಅನುಕೂಲವಾಗಿದೆ. ಹೆಣ್ಣುಮಕ್ಕಳಿಗೆ ವಸತಿ ಶಾಲೆ, ವಸತಿ ನಿಲಯಗಳನ್ನು ತೆರೆಯಲಾಗುತ್ತಿದೆ. ಇದು ಹೆಣ್ಣುಮಕ್ಕಳ ಕಲ್ಯಾಣಕ್ಕೆ ಸಾಧ್ಯವಾಗಲಿದೆ’ ಎಂದರು.
ಸೋಲುವ ಭೀತಿ: ಭಾರತ ಡಿಜಿಟಲೀಕರಣಗೊಂಡಿರುವ ಈ ಕಾಲದಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರು ಪಾಲಿಕೆ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ಮುಂದಾಗಿದೆ. ಇದು ಸೋಲುವ ಭೀತಿಯನ್ನು ತೋರಿಸುತ್ತಿದೆ’ ಎಂದು ತಿಳಿಸಿದರು.
ಧರಣಿ ಮಾಡುವೆ: ತುಂಗಭದ್ರಾ ಜಲಾಶಯದ ಗೇಟುಗಳ ಅಳವಡಿಕೆ ಕಾರ್ಯ ಫೆ. 28ರ ಒಳಗಾಗಿ ಸೂಕ್ತ ರೀತಿಯಲ್ಲಿ ನಡೆಯದೇ ಹೋದರೆ, ಆ ಬಳಿಕ ಧರಣಿ ಆರಂಭಿಸಲಿದ್ದೇನೆ. ಗೇಟುಗಳನ್ನು ಅಳವಡಿಸುವವರೆಗೆ ನಿರಂತರ ಧರಣಿ ಮುಂದುವರಿಯಲಿದೆ’ ಎಂದರು.
‘ಈ ಸರ್ಕಾರಕ್ಕೆ ಅಯುಷ್ಯ ಕಡಿಮೆ ಇದೆ. ಯತೀಂದ್ರ ಅವರೇ ಹೈಕಮೆಂಡ್ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ಬಜೆಟ್ ಮುಗಿದ ಬಳಿಕ ನಾಯಕತ್ವ ಬದಲಾವಣೆ ಆಗಲಿದೆ. ನೂರಕ್ಕೆ ನೂರರಷ್ಟು ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಕೆಲ ಶಾಸಕರು ಹೇಳುತ್ತಿದ್ದಾರೆ. ಎಲ್ಲರೂ ಸಂದರ್ಭಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದ್ದು, ಹೈಕಮಾಂಡ್ ಹೆಸರಲ್ಲಿ ಲೂಟಿ ಹೊಡೆಯುತ್ತಿದೆ. ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದೇ ಲೂಟಿ ಮಾಡಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.