
ಕೊಟ್ಟೂರು: ಪಟ್ಟಣದ 9 ನೇ ವಾರ್ಡಿಗೆ ಒಳಪಡುವ ಬಸವೇಶ್ವರ ಬಡಾವಣೆಯಲ್ಲಿರುವ ದ.ರಾ.ಬೇಂದ್ರೆ ಶಾಲೆಯ ಸುತ್ತ ಮುತ್ತಲಿನ ಪ್ರದೇಶ ಕಳೆದ 20 ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಬಡಾವಣೆ ನಿರ್ಮಾಣವಾದಾಗಿನಿಂದಲೂ ಡಾಂಬರ್ ಕಾಣದ ರಸ್ತೆಗಳು, ಚರಂಡಿ, ವಿದ್ಯುತ್ ದೀಪ ಮುಂತಾದ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದರೂ ಇತ್ತ ಕಡೆ ಗಮನಹರಿಸದಿರುವುದು ಸ್ಧಳೀಯ ಆಡಳಿತ ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ರಸ್ತೆ ಮತ್ತು ಚರಂಡಿ ಇಲ್ಲದ ಪರಿಣಾಮ ಮಳೆಗಾಲದಲ್ಲಿ ತ್ಯಾಜ್ಯವು ರಸ್ತೆಯಲ್ಲೆ ಹರಡುವುದರಿಂದ ನಿವಾಸಿಗಳು ಕೆಸರು ಗದ್ದೆಯಿಂತಿರುವ ರಸ್ತೆಗಳಲ್ಲಿ ಸಾಗಬೇಕಾದರೇ ಹರಸಾಹಸ ಪಡಬೇಕಾಗುತ್ತದೆ. ಇನ್ನು ವೃದ್ಧರು ಹಾಗೂ ಮಕ್ಕಳ ಗೋಳು ಹೇಳತೀರದು.
ಮಳೆ ಬಂತೆಂದರೆ ಮನೆ ಮುಂಭಾಗದ ರಸ್ತೆಯಲ್ಲಿರುವ ತಗ್ಗು ಗುಂಡಿಗಳಲ್ಲಿ ನೀರು ನಿಂತುಕೊಳ್ಳುತ್ತವೆ. ರಸ್ತೆಯಲ್ಲಿ ಕಾರು, ಬೈಕ್ ಗಳು ಓಡಾಡಿದರೆ ರಸ್ತೆಯ ಕೆಸರೆಲ್ಲಾ ಮನೆಯ ಮುಂದೆ ನಿಂತಿರುವ ನಮ್ಮ ಗಾಡಿಗಳಿಗೆ ಮತ್ತು ಮನೆಗಳಿಗೆ ಸಿಡಿಯುತ್ತದೆ ಎಂದು ಇಂದ್ರಮ್ಮ, ಮಂಗಳ, ಪ್ರತಿಭಾ, ಸೌಮ್ಯ ಮುಂತಾದ ನಿವಾಸಿಗಳು ತಮ್ಮ ನೋವನ್ನು ಹಂಚಿಕೊಂಡರು.
ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕರು ಹಾಗೂ ಪಟ್ಟಣ ಪಂಚಾಯ್ತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಧಳೀಯ ನಿವಾಸಿ ಮಂಜುನಾಥ್ ಅಸಮಧಾನ ವ್ಯಕ್ತ ಪಡಿಸಿದರು.
ಆದ್ಯತೆ ಮೇರೆಗೆ ಬಡಾವಣೆಯ ಮೂಲ ಸೌಕರ್ಯ ಕಲ್ಪಿಸಲು ಮುಂದಾಗುವುದಾಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲ ತಿಳಿಸಿದರು.
ಕೂಡಲೇ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಲು ಸ್ಧಳೀಯ ಆಡಳಿತ ಮುಂದಾಗ ಬೇಕೆಂದು ಸ್ಧಳೀಯರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.