ವಿಜಯದಶಮಿ ಅಂಗವಾಗಿ ಬಳ್ಳಾರಿ ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು
ಬಳ್ಳಾರಿ: ಜಿಲ್ಲೆಯಾದ್ಯಂತ ನಾಡಹಬ್ಬ ದಸರಾ ಹಬ್ಬದ ಸಡಗರ, ಸಂಭ್ರಮ ಮನೆಮಾಡಿತ್ತು. ಜನರು ಕುಟುಂಬ ಸಮೇತ ಕನಕ ದುರ್ಗಮ್ಮ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಬುಧವಾರ ಆಯುಧಪೂಜೆ ಪ್ರಯುಕ್ತ ವಾಹನ, ಆಯುಧ ಮತ್ತು ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು. ಕೆಲವರು ಹೊಸ ವಾಹನಗಳನ್ನು ಕೊಂಡು ಸಂಭ್ರಮಿಸಿದರು. ಗುರುವಾರ ವಿಜಯದಶಮಿ ಅಂಗವಾಗಿ ‘ಬನ್ನಿ' ಕೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕನಕದುರ್ಗಮ್ಮ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಯಿತು. ನವರಾತ್ರಿ ಹಿನ್ನೆಲೆ ನವದುರ್ಗೆಯರ ಪ್ರತಿಷ್ಠಾಪನೆ ಮಾಡಿ ಒಂಬತ್ತು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ನಗರದ ಏಳುಮಕ್ಕಳತಾಯಿ ದೇವಸ್ಥಾನ, ಸಣ್ಣ ದುರ್ಗಮ್ಮ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಭಕ್ತರು ಕಿಕ್ಕಿರಿದಿದ್ದರು. ಕನಕದುರ್ಗಮ್ಮ ದೇವಸ್ಥಾನದಲ್ಲಿ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು. ರಾಯಲ್ ವೃತ್ತ, ಎಸ್ಪಿ ಸರ್ಕಲ್, ಕೌಲ್ಬಜಾರ್ ಗೇಟ್, ಬಂಡಿಮೋಟ್ವರೆಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.
‘ಕನಕ ದುರ್ಗಮ್ಮ ದೇವಸ್ಥಾನಕ್ಕೆ ರಾಜ್ಯದಿಂದಷ್ಟೇ ಅಲ್ಲದೆ, ಹೊರರಾಜ್ಯಗಳಿಂದಲೂ ಕಳೆದ 10 ದಿನಗಳಲ್ಲಿ ಐದು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ’ ಎಂದು ದೇವಸ್ಥಾನದ ಕಾರ್ಯ ನಿರ್ವಾಹಕ ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.