ಕಂಪ್ಲಿ: ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ಕಚೇರಿ ಬಳಿಯ ವಿಜಯನಗರ ಕಾಲುವೆ ಕೆಳಭಾಗದ ಕೋಡಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿದ ಟ್ರ್ಯಾಕ್ಟರ್ ಹಿಂಭಾಗದ ಟ್ರ್ಯಾಲಿ ಭಾನುವಾರ ಏಕಾಏಕಿ ಓರೆಯಾಗಿ ಸಿಕ್ಕಿಹಾಕಿಕೊಂಡ ಪರಿಣಾಮ ಸುಮಾರು 10ಚೀಲದಷ್ಟು ಭತ್ತ ನೀರು ಪಾಲಾಗಿದೆ.
ಕಾಲುವೆ ಬಳಿ ಕೋಡಿ ನೀರು ಹರಿದು ಹೋಗಲು ರಸ್ತೆಗೆ ಅವೈಜ್ಞಾನಿಕವಾಗಿ ಪೈಪ್ ಅಳವಡಿಸಿರುವುದರಿಂದ ಕೃಷಿ ಚಟುವಟಿಕೆಗೆ, ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ಸಾಗಿಸಲು, ವಾಹನ ಸಂಚಾರಕ್ಕೆ, ಪಾದಾಚಾರಿಗಳಿಗೆ ತೊಂದರೆಯಾಗಿದೆ.ತ್ವರಿತವಾಗಿ ನೂತನ ಸೇತುವೆ ನಿರ್ಮಿಸಿ ರೈತರ ಸಂಕಷ್ಟ ತಪ್ಪಿಸುವಂತೆ ರೈತರಾದ ಕೆ. ಚಂದ್ರಶೇಖರ, ರಾಜಕುಮಾರ್ ಪಾಟೀಲ್, ಕನಕಗಿರಿ ರೇಣುಕಪ್ಪ, ಮಂಜುನಾಥ ಗೌಡ, ಒಂಟಿ ನಾಗರಾಜ, ಎಂ. ವೀರೇಶ, ಒಂಟಿ ಚಾಗಪ್ಪ ಇತರರು ಒತ್ತಾಯಿಸಿದರು.
‘ಕೋಡಿ ನೀರು ಸಮರ್ಪಕವಾಗಿ ಹರಿದು ಹೋಗಲು ಸೇತುವೆ ನಿರ್ಮಿಸುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಕಮಲಾಪುರದ ನೀರಾವರಿ ನಿಗಮದ ಜೆಇ ವೀರಭದ್ರಯ್ಯಸ್ವಾಮಿ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.