ADVERTISEMENT

‘ವಿಜಯನಗರದಲ್ಲಿ ಬದಲಾವಣೆ ಬಯಸಿದ ಜನ’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:20 IST
Last Updated 27 ಸೆಪ್ಟೆಂಬರ್ 2022, 6:20 IST
ಮಾಜಿಶಾಸಕರೂ ಆದ ಕಾಂಗ್ರೆಸ್‌ ಮುಖಂಡ ಎಚ್.ಆರ್‌. ಗವಿಯಪ್ಪನವರು ಸೋಮವಾರ ಹೊಸಪೇಟೆ ತಾಲ್ಲೂಕಿನ ಮಲಪನಗುಡಿಯಲ್ಲಿ ಪ್ರಚಾರದ ಸಂದರ್ಭದಲ್ಲಿ ಮಕ್ಕಳ ಕೈಕುಲುಕಿದರು
ಮಾಜಿಶಾಸಕರೂ ಆದ ಕಾಂಗ್ರೆಸ್‌ ಮುಖಂಡ ಎಚ್.ಆರ್‌. ಗವಿಯಪ್ಪನವರು ಸೋಮವಾರ ಹೊಸಪೇಟೆ ತಾಲ್ಲೂಕಿನ ಮಲಪನಗುಡಿಯಲ್ಲಿ ಪ್ರಚಾರದ ಸಂದರ್ಭದಲ್ಲಿ ಮಕ್ಕಳ ಕೈಕುಲುಕಿದರು   

ಹೊಸಪೇಟೆ (ವಿಜಯನಗರ): ‘ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ’ ಎಂದು ಮಾಜಿಶಾಸಕರೂ ಆದ ಕಾಂಗ್ರೆಸ್‌ ಮುಖಂಡರ ಎಚ್‌.ಆರ್‌.ಗವಿಯಪ್ಪ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ವಿಜಯನಗರ ಕ್ಷೇತ್ರದಿಂದ ನಾಲ್ಕು ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಸಲ ಜನ ಬದಲಾವಣೆ ಬಯಸಿದ್ದಾರೆ. ಈ ಸಲ ಕ್ಷೇತ್ರದ ಮತದಾರರು ನನಗೆ ಜನರ ಸೇವೆ ಮಾಡುವುದಕ್ಕೆ ಅವಕಾಶ ಕೊಡಬೇಕೆಂದು ಕೇಳಿದರು.

ಈ ದಿನ ಹಂಪಿಯಲ್ಲಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ತಾಲ್ಲೂಕಿನ ಮಲಪನಗುಡಿಯಿಂದ ಕಾಂಗ್ರೆಸ್‌ ಪಕ್ಷದ ಪ್ರಚಾರ ಅಭಿಯಾನ ಆರಂಭಿಸಿದ್ದೇನೆ. ದಿನಕ್ಕೊಂದು ಹಳ್ಳಿ ಅಥವಾ ವಾರ್ಡ್‌ಗಳಿಗೆ ಭೇಟಿ ಕೊಟ್ಟು ಪಕ್ಷದ ಪರ ಪ್ರಚಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ADVERTISEMENT

ಕಾಂಗ್ರೆಸ್‌ ಮುಖಂಡ ಶಿವಮೂರ್ತಿ ನಾಯಕ ಮಾತನಾಡಿ, ವಿಜಯನಗರ ಜಿಲ್ಲೆಯ 253 ದಾಖಲೆಗಳಿಲ್ಲದ ಗ್ರಾಮಗಳ ಜನರಿಗೆ ದಾಖಲೆಗಳನ್ನು ಒದಗಿಸಿ ನ್ಯಾಯ ಒದಗಿಸಬೇಕು. ರಾಜ್ಯದಲ್ಲಿ 3227 ದಾಖಲೆಗಳಿಲ್ಲದ ಗ್ರಾಮಗಳಿಗೆ ದಾಖಲೆಗಳನ್ನು ಒದಗಿಸುತ್ತಿಲ್ಲ. ಕೂಡಲೇ ದಾಖಲೆಗಳನ್ನು ಒದಗಿಸಿ ಜನರ ಸಂಕಷ್ಟ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಹುಡಾ ಮಾಜಿ ಅಧ್ಯಕ್ಷ ವೆಂಕಟೇಶ ರೆಡ್ಡಿ ಇದ್ದರು.

ಇದಕ್ಕೂ ಮುನ್ನ ಗವಿಯಪ್ಪನವರು ಹಂಪಿ, ಮಲಪನಗುಡಿಯಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿ ಪ್ರಚಾರ ಕೈಗೊಂಡರು. ನಗರಸಭೆ ಸದಸ್ಯ ಖಾರದಪುಡಿ ಮಹೇಶ, ಹೊನ್ನೂರಪ್ಪ, ಕುರುಬರ ಲಮಾಣಿ, ಲಂಬಾಣಿ ರಘು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.