ಹೊಸಪೇಟೆ (ವಿಜಯನಗರ): ‘ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಕಾಸ ಬ್ಯಾಂಕ್ ಒಂದು ಸಾವಿರ ಕೋಟಿ ರೂಪಾಯಿ ವ್ಯವಹಾರ ನಡೆಸುವ ಗುರಿ ಹೊಂದಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.
‘2020–21ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಒಟ್ಟು ₹937.55 ಕೋಟಿ ವ್ಯವಹಾರ ನಡೆದಿದೆ. ಒಟ್ಟು ₹12.84 ಕೋಟಿ ಲಾಭ ಆಗಿದ್ದು, ಈ ಪೈಕಿ ₹4.38 ಕೋಟಿ ನಿವ್ವಳ ಲಾಭವಾಗಿದೆ. ಶೇ 4.22 ಅನುತ್ಪಾದಕ ಆಸ್ತಿ, ಶೇ 2.36 ನಿವ್ವಳ ಅನುತ್ಪಾದಕ ಆಸ್ತಿ ಹೊಂದಲಾಗಿದೆ. ₹577.44 ಕೋಟಿ ಠೇವಣಿ ಇದ್ದು, ₹360.11 ಕೋಟಿ ಸಾಲ ನೀಡಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
‘ಕೋವಿಡ್ ಲಾಕ್ಡೌನ್ ನಡುವೆಯೂ ಬ್ಯಾಂಕ್ ಉತ್ತಮ ಸಾಧನೆ ಮಾಡಿದೆ. ರಾಜ್ಯದ 265 ಅರ್ಬನ್ ಬ್ಯಾಂಕುಗಳ ಪೈಕಿ ನಮ್ಮ ಬ್ಯಾಂಕಿನ ಪ್ರಗತಿ ಉತ್ತಮವಾಗಿದೆ. ಲಾಕ್ಡೌನ್ನಲ್ಲಿ ಬ್ಯಾಂಕಿಂಗ್ ವಲಯದವರು ಕೋವಿಡ್ ವಾರಿಯರ್ಸ್ಗಳಂತೆ ಕೆಲಸ ನಿರ್ವಹಿಸಿದ್ದಾರೆ. ಆದರೆ, ಸರ್ಕಾರ ನಮ್ಮನ್ನು ಗುರುತಿಸದಿರುವುದು ನೋವು ತಂದಿದೆ’ ಎಂದು ಹೇಳಿದರು.
‘ಹೊಸಪೇಟೆ, ತೋರಣಗಲ್ಲು ಹಾಗೂ ಸಿಂಧನೂರಿನಲ್ಲಿ ಬ್ಯಾಂಕಿನ ಸ್ವಂತ ನಿವೇಶನಗಳಿವೆ. ಈ ವರ್ಷ ಬ್ಯಾಂಕು 24 ವರ್ಷ ಪೂರೈಸಿ 25ನೇ ವರ್ಷಕ್ಕೆ ಕಾಲಿರಿಸಲಿದೆ. ಬೆಳ್ಳಿ ಹಬ್ಬದ ಸವಿನೆನಪಿನಲ್ಲಿ ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ವರ್ಷವಿಡೀ ಬಗೆಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.
‘ಬ್ಯಾಂಕಿನ 5,000 ಸಾಮಾನ್ಯ ಗ್ರಾಹಕರಿಗೆ ಆರೋಗ್ಯ ವಿಮೆ ರಕ್ಷಣೆಯ ಸೌಲಭ್ಯ ನೀಡಲಾಗಿದೆ. ₹2,345 ವೆಚ್ಚದಲ್ಲಿ ₹3 ಲಕ್ಷದ ವರೆಗೆ ವಿಮೆ ಸೌಲಭ್ಯ ಒದಗಿಸಲಾಗಿದೆ. ಈಗಾಗಲೇ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 94 ಗ್ರಾಹಕರಿಗೆ ₹45 ಲಕ್ಷಕ್ಕೂ ಅಧಿಕ ವಿಮೆ ಹಣ ಮರು ಪಾವತಿಸಲಾಗಿದೆ’ ಎಂದು ವಿವರಿಸಿದರು.
ಬ್ಯಾಂಕಿನ ನಿರ್ದೇಶಕರಾದ ಛಾಯಾ ದಿವಾಕರ್, ರಮೇಶ, ದೊಡ್ಡ ಬೋರಯ್ಯ, ವೆಂಕಪ್ಪ, ಪ್ರಸನ್ನ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.