ADVERTISEMENT

ಕ್ವಾರೆಂಟೈನ್‌ ವಾಸಿಗಳಿಂದ ಶ್ರಮದಾನ

ವಸತಿ ಶಾಲೆ ಕೈತೋಟ, ಅವರಣಕ್ಕೆ ಹೊಸರೂಪ

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:19 IST
Last Updated 25 ಮೇ 2020, 20:19 IST
ಹೂವಿನಹಡಗಲಿ ತಾಲ್ಲೂಕು ಮದಲಗಟ್ಟಿ ಮೊರಾರ್ಜಿ ವಸತಿ ಶಾಲೆಯ ಕ್ವಾರೆಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರು ತೆಂಗಿನ ತೋಪಿನಲ್ಲಿ ಶ್ರಮದಾನ ಮಾಡಿದರು
ಹೂವಿನಹಡಗಲಿ ತಾಲ್ಲೂಕು ಮದಲಗಟ್ಟಿ ಮೊರಾರ್ಜಿ ವಸತಿ ಶಾಲೆಯ ಕ್ವಾರೆಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರು ತೆಂಗಿನ ತೋಪಿನಲ್ಲಿ ಶ್ರಮದಾನ ಮಾಡಿದರು   

ಹೂವಿನಹಡಗಲಿ (ಬಳ್ಳಾರಿ): ತಾಲ್ಲೂಕಿನ ಮದಲಗಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ವಲಸೆ ಕಾರ್ಮಿಕರು ಸ್ವಪ್ರೇರಣೆಯಿಂದ ಶ್ರಮದಾನ ಮಾಡಿ, ಕೇಂದ್ರದ ಆವರಣಕ್ಕೆ ಹೊಸ ರೂಪ ನೀಡಿದ್ದಾರೆ. ಆವರಣದಲ್ಲಿದ್ದ ಅಲ್ಲಿ ತೆಂಗಿನ ತೋಪು, ಹಣ್ಣಿನ ಗಿಡಗಳು ನಳನಳಿಸುವಂತೆ ಮಾಡಿದ್ದಾರೆ.

ಕೇರಳದಿಂದ ತಾಲ್ಲೂಕಿನ ಬಸರಕೋಡು ತಾಂಡಾ, ಕೊಮಾರನಹಳ್ಳಿ ತಾಂಡಾ, ಮಾನ್ಯರಮಸಲವಾಡ, ಮಿರಾಕೊರನಹಳ್ಳಿಗೆ ಮರಳಿದ್ದ 52 ಜನರನ್ನು ಇಲ್ಲಿ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ಊಟ, ವಿಶ್ರಾಂತಿ, ಕಾಲಹರಣದಂತಹ ಅನುಭವದಿಂದ ಎರಡೇ ದಿನಕ್ಕೆ ಬೇಸರಗೊಂಡ ಕಾರ್ಮಿಕರು, ಕೇಂದ್ರದ ಆವರಣದಲ್ಲಿ ಗಿಡಮರಗಳ ಸ್ವಚ್ಛತೆಗೆ ಅವಕಾಶ ಕಲ್ಪಿಸಲು ಕೋರಿದರು. ಕೇಂದ್ರದ ನೋಡಲ್ ಅಧಿಕಾರಿಯೂ ಆದ ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ ಅವಕಾಶ ಕಲ್ಪಿಸಿದರು.

ADVERTISEMENT

ಗುದ್ದಲಿ, ಸಲಿಕೆಗಳನ್ನು ತರಿಸಿಕೊಂಡು ಶ್ರಮದಾನಕ್ಕೆ ಮುಂದಾದರು. ನೂರಾರು ತೆಂಗಿನ ಮರ, ನಿಂಬೆ, ಸಪೋಟ, ಮಾವು ಗಿಡಗಳು, ಆಲಂಕಾರಿಕ ಗಿಡಗಳ ಸುತ್ತಲೂ ಸ್ವಚ್ಛಗೊಳಿಸಿದರು. ನೀರು ಪೂರೈಕೆಗೆ ವ್ಯವಸ್ಥೆ ಮಾಡಿದರು. ಕಾರ್ಮಿಕರ ಶ್ರಮದಿಂದ ಮೊರಾರ್ಜಿ ಶಾಲೆಯ ಕೈ ತೋಟಕ್ಕೆ ಹೊಳಪು ಬಂದಿದೆ.

‘ಕ್ವಾರಂಟೈನ್‌ ಕೇಂದ್ರದಲ್ಲಿ ಬೇಸರ ಆಗುತಿತ್ತು. ನಾವು ಎಂದೂ ಖಾಲಿ ಕುಳಿತವರಲ್ಲ. ಎಲ್ಲರೂ ಒಟ್ಟುಗೂಡಿ ಕೈತೋಟ ಸ್ವಚ್ಛಗೊಳಿಸಲು ನಿರ್ಧರಿಸಿದೆವು. ಈ ಕಾರ್ಯ ನಮಗೆ ಸಮಧಾನ ತಂದಿದೆ’ ಎಂದು ಬಸರಕೋಡು ತಾಂಡಾದ ರಮೇಶನಾಯ್ಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.