ಹೊಸಪೇಟೆ: ‘ಯೋಗದ ಮಹತ್ವ, ಜ್ಞಾನ ಅರಿತುಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ತಿಳಿಸಿದರು.
ಬುಧವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಯೋಗ ಅಧ್ಯಯನ ಕೇಂದ್ರದಿಂದ ಹಮ್ಮಿಕೊಂಡಿದ್ದ ಯೋಗ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಿತ್ಯ ಯೋಗ ಮಾಡಿದರೆ ಅನೇಕ ಕಾಯಿಲೆಗಳಿಂದ ದೂರ ಇರಬಹುದು.ಮಾನಸಿಕ, ದೈಹಿಕವಾಗಿ ಸದೃಢರಾಗಿರಬಹುದು. ಹಿಂದೆ ನಮ್ಮ ಪೂರ್ವಿಕರು ಸದೃಢ ಆರೋಗ್ಯ ಹಾಗೂ ದೀರ್ಘಾಯಷ್ಯದಿಂದ ಜೀವನ ನಡೆಸಲು ಮುಖ್ಯ ಕಾರಣ ನಿತ್ಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸಮಯಕ್ಕೆ ಸರಿಯಾಗಿ ಊಟ, ಕೆಲಸ ಹಾಗೂ ನಿದ್ದೆ ಮಾಡುತ್ತಿದ್ದರಿಂದ ಆರೋಗ್ಯವಂತರಾಗಿದ್ದರು. ಆದರೆ, ಇಂದಿನ ಒತ್ತಡದ ಜೀವನ ಶೈಲಿಯಿಂದ ಅನೇಕ ರೋಗಗಳು ಬರುತ್ತಿವೆ’ ಎಂದರು.
‘ನಮ್ಮ ಏಕಾಗ್ರತೆಗೆ ಮಾರ್ಗಧ್ಯಾನ, ಧ್ಯಾನದ ಮಾರ್ಗ ಯೋಗ, ಯೋಗದ ಅನೇಕ ಲಾಭಗಳನ್ನು ನಾವು ಪಡೆದುಕೊಳ್ಳಬೇಕಾಗಿದೆ. ಡಿಪ್ಲೊಮಾ ಕೋರ್ಸುಗಳನ್ನು ಸಾಮಾನ್ಯ ಎಂದು ಭಾವಿಸದೆ, ಗಂಭೀರವಾಗಿ ಪರಿಗಣಿಸಬೇಕು. ಅದರ ಪ್ರಯೋಜನ ಪಡೆದು, ಇತರರಿಗೂ ಅದರ ಮಹತ್ವ ಸಾರಬೇಕು’ ಎಂದು ಹೇಳಿದರು.
ಕುಲಸಚಿವ ಎ. ಸುಬ್ಬಣ್ಣ ರೈ,ಪತಂಜಲಿ ಯೋಗ ಸಮಿತಿಯ ರಾಜ್ಯ ಸಂಚಾಲಕ ಬಾಲಚಂದ್ರ ಶರ್ಮಾ, ಯೋಗ ಅಧ್ಯಯನ ಕೇಂದ್ರದ ನಿರ್ದೇಶಕ ಎಫ್.ಟಿ ಹಳ್ಳಿಕೇರಿ, ಚರಿತ್ರೆ ಅಧ್ಯಯನ ವಿಭಾಗದ ಮುಖ್ಯಸ್ಥ ಚಿನ್ನಸ್ವಾಮಿ ಸೋಸಲೆ, ಪ್ರಾಧ್ಯಾಪಕ ಮಾಧವ ಪೆರಾಜೆ, ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ವೈದ್ಯ ಸಂಪತ್ಕುಮಾರ್ ತಗ್ಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.