ADVERTISEMENT

ಹೊಸಪೇಟೆ: ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೋಯರ್‌ ನಾರಾಯಣರಾವ್‌ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:59 IST
Last Updated 1 ಫೆಬ್ರುವರಿ 2023, 5:59 IST
ಹರ್ಷಲ್‌ ಭೋಯರ್‌ ನಾರಾಯಣರಾವ್‌
ಹರ್ಷಲ್‌ ಭೋಯರ್‌ ನಾರಾಯಣರಾವ್‌   

ಹೊಸಪೇಟೆ (ವಿಜಯನಗರ): ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌ ಅವರನ್ನು ಸರ್ಕಾರ ಮಂಗಳವಾರ ವರ್ಗಾವಣೆಗೊಳಿಸಿದ್ದು, ಅವರ ಜಾಗಕ್ಕೆ ಸದಾಶಿವ ಪ್ರಭು ಬಿ. ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

ಸದಾಶಿವ ಪ್ರಭು ಅವರು ಕರ್ನಾಟಕ ಅಪೆಲೆಟ್‌ ಟ್ರಿಬ್ಯುನಲ್‌ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನು, ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಸಿಇಒ ಹರ್ಷಲ್‌ ಭೋಯರ್‌ ನಾರಾಯಣರಾವ ಅವರಿಗೆ ಸರ್ಕಾರ ಸ್ಥಳ ತೋರಿಸಿಲ್ಲ. ಜಿಲ್ಲೆ ರಚನೆಗೊಂಡ ನಂತರ ಮೊದಲ ಸಿಇಒ ಆಗಿ ನೇಮಕಗೊಂಡಿದ್ದರು. 2021ರ ಅಕ್ಟೋಬರ್‌ 11ರಂದು ಅಧಿಕಾರ ಸ್ವೀಕರಿಸಿದ್ದರು. ನವೆಂಬರ್‌ 4ರಂದು ಅನಿರುದ್ಧ್‌ ಶ್ರವಣ್‌ ಪಿ., ಡಾ. ಅರುಣ್‌ ಕೆ. ಅವರನ್ನು ಕ್ರಮವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನದಿಂದ ಬೇರೆಡೆ ವರ್ಗಾವಣೆಗೊಳಿಸಲಾಗಿತ್ತು. ಇವರಿಬ್ಬರು ಹರ್ಷಲ್‌ಗಿಂತ ಒಂಬತ್ತು ದಿನಗಳ ಮುಂಚೆ ಅಂದರೆ 2021ರ ಅ.2ರಂದು ಅಧಿಕಾರ ಸ್ವೀಕರಿಸಿದ್ದರು. ಜಿಲ್ಲೆಗೆ ಒಟ್ಟಿಗೆ ಬಂದಿದ್ದ ಮೂವರು ಅಧಿಕಾರಿಗಳನ್ನು ಕೆಲವೇ ದಿನಗಳ ಅಂತರದೊಳಗೆ ವರ್ಗಾವಣೆಗೊಳಿಸಲಾಗಿದೆ. ಮೂವರು ದಕ್ಷತೆಗೆ ಹೆಸರಾಗಿದ್ದರು. ಆರಂಭಿಕ ಹಂತದಲ್ಲಿ ಹೊಸ ಜಿಲ್ಲೆ ಕಟ್ಟಲು ಸಾಕಷ್ಟು ಶ್ರಮ ವಹಿಸಿದ್ದರು.

‘ನನಗೆ ಸರ್ಕಾರ ಸ್ಥಳ ತೋರಿಸಿಲ್ಲ. ಬೆಂಗಳೂರಿಗೆ ಹೋಗಿ ವರದಿ ಮಾಡಿಕೊಳ್ಳುವೆ. ಅನಂತರ ಎಲ್ಲಿ ಸ್ಥಳ ತೋರಿಸುತ್ತಾರೋ ಅಲ್ಲಿಗೆ ಹೋಗಿ ಕೆಲಸ ನಿರ್ವಹಿಸುವೆ’ ಎಂದು ಸಿಇಒ ಹರ್ಷಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಹಶೀಲ್ದಾರ್‌ಗಳ ವರ್ಗಾವಣೆ:

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ ನಿರ್ದೇಶಕರಾಗಿದ್ದ ಕೆ. ಗುರುಬಸವರಾಜು ಅವರನ್ನು ರಾಣೆಬೆನ್ನೂರು ತಾಲ್ಲೂಕಿನ ಗ್ರೇಡ್‌–1 ತಹಶೀಲ್ದಾರ್‌ರಾಗಿ ಸರ್ಕಾರ ನೇಮಿಸಿದೆ. ಕೊಟ್ಟೂರಿನಲ್ಲಿ ಗ್ರೇಡ್‌–2 ತಹಶೀಲ್ದಾರ್‌ ಆಗಿದ್ದ ನಿಸರ್ಗ ಪ್ರಿಯಾ ಅವರಿಗೆ ಮಂಡ್ಯ ಜಿಲ್ಲೆ ಕೆ.ಆರ್‌. ಪೇಟೆಗೆ ಗ್ರೇಡ್‌–1 ತಹಶೀಲ್ದಾರ್‌ ಆಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.