ADVERTISEMENT

ಕುಂದುಕೊರತೆ: ಶಾಸಕರಿಂದ ವಾರ್ಡ್‌ಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ದೇವನಹಳ್ಳಿ: ಪುರಸಭೆ ವ್ಯಾಪ್ತಿಯ 23ವಾರ್ಡುಗಳ ನಾಗರಿಕರ ಕುಂದು ಕೊರತೆ ತಿಳಿಯಲು ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಲಾಗುವುದು ಎಂದು ಶಾಸಕ ಕೆ.ವೆಂಕಟಸ್ವಾಮಿ ತಿಳಿಸಿದರು.

ಪಟ್ಟಣದ 6ನೇ ವಾರ್ಡಿನ ಗಾಣಿಗರ ಬೀದಿಯಲ್ಲಿ ಗುರುವಾರ ನಾಗರಿಕರ ಕುಂದು ಕೊರತೆ ಆಲಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಗ್ರಾಮೀಣ ಪ್ರದೇಶಕ್ಕಿಂತ ಪಟ್ಟಣದಲ್ಲಿ ಹೆಚ್ಚಾಗಿದೆ.

 ಇಲ್ಲಿ ಪ್ರತಿ 10 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಕೊಳಚೆ ಪ್ರದೇಶದಲ್ಲಿ ಸೂಕ್ತ ಚರಂಡಿ ನಿರ್ವಹಣೆ ಆಗಬೇಕಾಗಿದೆ. ಅನೇಕ ಬೀದಿಗಳಲ್ಲಿರುವ ಹಳೆಯ ವಿದ್ಯುತ್ ಕಂಬಗಳನ್ನು  ತೆರೆವುಗೊಳಿಸಿ ಹೊಸ ಕಂಬ ಅಳವಡಿಸಬೇಕಿದೆ ಎಂದರು.

ಕುಡಿಯುವ ನೀರಿನ ತುರ್ತು ನಿರ್ವಹಣೆಗೆ ಪುರಸಭೆಯ ಸಿ.ಆರ್.ಎಫ್ ಯೋಜನೆಯಲ್ಲಿ 5ಕೋಟಿ ರೂಪಾಯಿ ಅನುದಾನವಿದ್ದು, ಅಗತ್ಯವಿರುವ ಪ್ರತಿ ವಾರ್ಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದರು.   

6 ದಿನಗಳ ಕಾಲ ಎಲ್ಲ ವಾರ್ಡುಗಳಿಗೆ ತೆರಳಿ ಅಲ್ಲಿರುವ ಸಮಸ್ಯೆಗಳನ್ನು ತಿಳಿದು ನಿವಾರಣೆ ಮಾಡಬೇಕು. ಅಲ್ಲದೆ ಹೆಚ್ಚುವರಿಯಾಗಿ ಶಾಸಕರ ಅನುದಾನದಲ್ಲಿ 4ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಪುರಸಭೆ ಸದಸ್ಯ ಹಂಸರಾಜಣ್ಣ, ಜಿ.ಎನ್.ವೇಣುಗೋಪಾಲ್,  ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಎನ್.ರಘು,  ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್.ಸಿ.ಚಂದ್ರಪ್ಪ, ಶಂಕರ್, ಸೊಸೈಟಿ ನಂಜಪ್ಪ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.