ದೇವನಹಳ್ಳಿ: ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ವರ್ಷಕ್ಕೆ ಎರಡು ಬಾರಿಯಾದರೂ ಗ್ರಾಮಸಭೆಗಳನ್ನು ನಡೆಸಬೇಕೆಂಬ ಕಟ್ಟುನಿಟ್ಟಿನ ಅಧಿಸೂಚನೆ ಇದ್ದರೂ ಕೆಲವು ಪಂಚಾಯಿತಿಗಳು ಈ ಆದೇಶವನ್ನು ಉಲ್ಲಂಘಿಸುತ್ತಿವೆ ಎಂದು ತಾ.ಪಂ.ಅಧ್ಯಕ್ಷ ಬಿ.ಕೆ.ಶಿವಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಸೇರಿದಂತೆ ವಿವಿಧ ಯೋಜನೆ, ಕಾಮಗಾರಿ ಆಯ್ಕೆ ಮಾಡುವುದು, ಕ್ರಿಯಾ ಯೋಜನೆ ತಯಾರಿಕೆ , ಅರ್ಹ ಪಲಾನುಭವಿಗಳ ಆಯ್ಕೆ ಹಾಗೂ ಅಭಿವೃದ್ಧಿ ಯೋಜನೆ ನಿರ್ಣ ಯ, ಬಡತನ ರೇಖೆಗಿಂತ ಕೆಳಗಿನವರನ್ನು ಗುರುತಿಸುವುದು ಇನ್ನಿತರೆವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದು ಮುಖ್ಯ. ಆದರೆ ಇದ್ಯಾವುದು ಸೂಕ್ತ ತಿಂಗಳಿನಲ್ಲಿ ಸಭೆ ನಡೆಸಿಲ್ಲ ಎಂದು ದೂರಿದರು.
ಪ್ರತಿಯೊಂದು ಗ್ರಾಮಸಭೆ ಮೇ ಅಥವಾ ಜೂನ್ನಲ್ಲಿ ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದ ಗ್ರಾಮಸಭೆ ನವಂಬರ್ ಇಲ್ಲವೇ ಡಿಸಂಬರ್ನಲ್ಲಿ ನಡೆಸಬೇಕು. ಆದರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ 21 ಗ್ರಾ. ಪಂ.ಗಳಿದ್ದರೂ ಯಾವ ಪಂಚಾಯಿತಿಯೂ ಸರ್ಕಾರದ ಆದೇಶ ಪಾಲಿಸಿಲ್ಲ. ಕೆಲವು ಗ್ರಾ.ಪಂ.ಗಳು ನೆಪಮಾತ್ರಕ್ಕೆ ಸಭೆ ನಡೆಸಿದ್ದು ಅದರ ತೀರ್ಮಾನಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದರು.
2011-12ನೇ ಸಾಲಿನಲ್ಲಿ ಆಯ್ಕೆಯಾದ ಅಭಿವೃದ್ಧಿ ಕಾರ್ಯಕ್ರಮಗಳೆಲ್ಲವು ಮಾರ್ಚ್ 31ಕ್ಕೆ ಮುಕ್ತಾಯವಾಗಬೇಕು. ಆದರೆ ಜಾಲಿಗೆ, ಬೂದಿಗೆರೆ, ಚನ್ನಹಳ್ಳಿ ಪಂಚಾಯಿತಿಗಳಲ್ಲಿ ಸರ್ಕಾರದ ಆದೇಶಗಳನ್ನು ಪಾಲಿಸದೇ ನಿರ್ಲಕ್ಷಿಸುವುದು ಖಂಡನೀಯ ಎಂದರು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.