ದೊಡ್ಡಬಳ್ಳಾಪುರ: ಕಾರ್ಯಕರ್ತರು ಪಕ್ಷದಿಂದ ಆಯ್ಕೆ ಮಾಡಿದ ಅಧಿಕೃತ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಾದರೆ ಚುನಾವಣಾ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಎಚ್.ಜಿ. ವಿಜಯಕುಮಾರ್ ಹೇಳಿದರು.
ನಗರದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ನಡೆದ ರಾಜಘಟ್ಟ ಜಿಲ್ಲಾ ಪಂಚಾಯತಿ ವ್ಯಾಪ್ತಿ ಕ್ಷೇತ್ರಗಳ ಜೆಡಿಎಸ್ ಆಕಾಂಕ್ಷಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ಪಕ್ಷ ಗೆಲ್ಲುತ್ತಿದ್ದ ರಾಜಘಟ್ಟ ಕ್ಷೇತ್ರದಲ್ಲಿ ಕಳೆದ ಬಾರಿ ಅಭ್ಯರ್ಥಿ ಆಯ್ಕೆ ಗೊಂದಲದಿಂದಾಗಿ ಕ್ಷೇತ್ರ ಕೈ ತಪ್ಪಿಹೋಗಿತ್ತು. ಆದರೆ ಈ ಬಾರಿ ಅದೇ ರೀತಿ ಆಗುವುದು ಬೇಡ ಎಂದರು.
ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದ್ದು, ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸವಿದೆ ಎಂದರು. ನಗರಸಭಾ ಸದಸ್ಯ ಆರ್.ಗೋವಿಂದರಾಜು ಮಾತನಾಡಿ, ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೂ ಸಹ ಅವರ ಅರ್ಹತೆಗಳನ್ನು ಪರಿಶೀಲಿಸಬೇಕು ಎಂದರು.
ಸಭೆಯಲ್ಲಿ ರಾಜಘಟ್ಟ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಾಮಾನ್ಯ(ಮಹಿಳೆ) ಅಭ್ಯರ್ಥಿಯಾಗಿದೆ. ಮುನೇಗೌಡ ಅವರ ಕುಟುಂಬದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದು ಕೆಲವು ಮುಖಂಡರು ಅಭಿಪ್ರಾಯಪಟ್ಟರು. ಜಯಶ್ರೀ ಶಿವಣ್ಣ, ರಾಧಮ್ಮ ಶಿವಣ್ಣ, ಅನಿತಾ ರಾಜಗೋಪಾಲ್ ಮತ್ತಿತರರು ಆಕಾಂಕ್ಷಿಗಳಾಗಿದ್ದು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆಯಾಗಿಲ್ಲ.
ಸಭೆಯಲ್ಲಿ ಬಮೂಲ್ ಅಧ್ಯಕ್ಷ ಎಚ್.ಅಪ್ಪಯ್ಯಣ್ಣ, ಜೆಡಿಎಸ್ ಮುಖಂಡರಾದ ನರಸಿಂಹಯ್ಯ, ಆಂಜನಗೌಡ, ಚಿಕ್ಕರಾಮಕೃಷ್ಣಪ್ಪ, ಕೃಷ್ಣಪ್ಪ, ವೆಂಕಟೇಶ್ಬಾಬು ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.