ADVERTISEMENT

ಮಣ್ಣು ಪರೀಕ್ಷೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ದೊಡ್ಡಬಳ್ಳಾಪುರ: ಕೃಷಿ ವಿಜ್ಞಾನ ಕೇಂದ್ರದಿಂದ  ಗ್ರಾಮಗಳಿಗೆ ತೆರಳಿ ಮಣ್ಣು ಪರೀಕ್ಷೆಯನ್ನು ಮಾಡಲಾಗುತ್ತಿದ್ದು, ರೈತರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷಿಸಿಕೊಂಡು  ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಹಾಡೊನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕೆ.ಎನ್.ಶ್ರೀನಿವಾಸಪ್ಪ ಹೇಳಿದರು.

ತಾಲ್ಲೂಕಿನ  ಹಾಡೊನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಲ್ಲಸಂದ್ರ ಗ್ರಾಮದಲ್ಲಿ ಮಣ್ಣು ಪರೀಕ್ಷೆಯ ಮಹತ್ವ, ಸಮಗ್ರ ಪೋಷಕಾಂಶಗಳ ನಿರ್ವಹಣೆಯೊಂದಿಗೆ  ಪೀಡೆಗಳ ಜೈವಿಕ ನಿರ್ವಹಣೆ ಕುರಿತು ಶನಿವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

 ಕೃಷಿ ಭೂಮಿಯ ಮಣ್ಣನ್ನು ಪರೀಕ್ಷಿಸಿ ಅದರ ಫಲಿತಾಂಶದಿಂದ ಸಮಗ್ರವಾಗಿ ಮಣ್ಣಿನ ಪೋಷಕಾಂಶಗಳ ನಿರ್ವಹಣೆ ಹೇಗೆ ಮಾಡಬಹುದೆಂದು ತಿಳಿಸಿದ ಅವರು ತೋಟಗಾರಿಕೆ ಬೆಳೆಯಲ್ಲಿ ಕಾಣುವ ಲಘು ಪೋಷಕಾಂಶಗಳ ಕೊರತೆಯ ಚಿಹ್ನೆ ಹಾಗೂ ಅದರ ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.   

ಕೇಂದ್ರದ ಬೇಸಾಯ ತಜ್ಞ ಡಾ. ಜಿ.ಎಂ.ಸುಜಿತ್ ಮಾತನಾಡಿ, ಸಸಿಗಳ ಬೆಳವಣಿಗೆಯಲ್ಲಿ ಪ್ರಧಾನ ಹಾಗೂ ಲಘು ಪೋಷಕಾಂಶಗಳ ಪಾತ್ರ ಮತ್ತು ಅವು ದೊರೆಯುವ ಮೂಲದ ಜೈವಿಕ ಹಾಗೂ ರಾಸಾಯನಿಕ ಪದಾರ್ಥಗಳ ಬಗ್ಗೆ ವಿವರಣೆ ನೀಡಿದರು.

ಡಾ.ಸಿ.ಪಿ.ಮಂಜುಳ, ಪೋಷಕಾಂಶಗಳು ರೋಗ ಅಥವಾ ಕೀಟದ ಬೆಳವಣಿಗೆ ಮತ್ತು ನಿವಾರಣೆಯಲ್ಲಿ ಮಾಡುವ ಪಾತ್ರದ ಬಗ್ಗೆ ಹಾಗೂ ರೋಗದ ಮತ್ತು ಪೋಷಕಾಂಶಗಳ ಕೊರೆತೆಯ ಚಿಹ್ನೆಯಲ್ಲಿರು ವ್ಯತ್ಯಾಸದ ಬಗ್ಗೆ ವಿವರವಾಗಿ ತಿಳಿಸಿ, ಜೈವಿಕವಾಗಿ ಇವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವೆಂಕಟರಾಮಯ್ಯ, ಮಂಜುನಾಥ, ವೆಂಕಟೇಗೌಡ, ಜಯಮ್ಮ, ಗೋವಿಂದಪ್ಪ ಮತ್ತು ಚಿಕ್ಕಪಾಪಯ್ಯ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.