ADVERTISEMENT

ಯೋಜನೆ ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 16:35 IST
Last Updated 9 ಜನವರಿ 2012, 16:35 IST

ದೇವನಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಹಲವು  ಕ್ರಿಯಾ ಯೋಜನೆ ಗಳನ್ನು ರೂಪಿಸಿ ತರಬೇತಿ ನೀಡುತ್ತಿದ್ದು, ಮಹಿಳೆಯರು ಯೋಜನೆ ಮತ್ತು ತರಬೇತಿ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು  ಜಿಲ್ಲಾ ಪಂಚಾಯಿತಿ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪನಿರ್ದೇಶಕ ಎಲ್.ನಾಗರಾಜ್ ಸಲಹೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಬೆಎಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ ಕಾರ್ಮಿಕ ವಿಭಾಗ ಹಾಗೂ ಎಂಎಸ್‌ಎಂಇ ಡೆವಲಪ್‌ಮೆಂಟ್ ಸಂಸ್ಥೆ ಮಹಿಳೆಯರಿಗೆ ಆಯೋಜಿಸಿರುವ ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 4ಲಕ್ಷ ಸಣ್ಣ ಕೈಗಾರಿಕೆಗಳಿದ್ದು, 100ಕೋಟಿ ಬಂಡವಾಳ ತೊಡಗಿಸಿವೆ. 2009 ಅಂಕಿ ಅಂಶ ಪ್ರಕಾರ 28ಲಕ್ಷ ಜನರಿಗೆ  ಉದ್ಯೋಗಾವಕಾಶ ದೊರಕಿಸಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷ ಬಿ.ಕೆ.ಶಿವಣ್ಣ, ಬೃಹತ್ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಗ್ರಾಮೀಣರಿಗೆ ಸಾಧ್ಯವಿಲ್ಲ. ಅಲ್ಲದೆ ಶೇ 100ರಷ್ಟು ಸಾಕ್ಷರತೆ ಬೆಳವಣಿಗೆ ಯಾಗಿಲ್ಲ.

ಎಸ್‌ಜಿಎಸ್‌ಎವೈ ಯೋಜನೆಯಲ್ಲಿ 2 ಲಕ್ಷದವಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ  ದೊರಯಲಿದೆ. ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಗುಂಪುಗಳಿಗೆ 1.25 ಲಕ್ಷದವರೆಗೂ ಸಾಲ ಸೌಲಭ್ಯವಿದೆ ಎಂದರು.  ತರಬೇತಿ ಅಧಿಕಾರಿ ಟಿ.ಎನ್.ಲಕ್ಷ್ಮಿಪತಿ ಮಾತನಾಡಿದರು.

ಜಿ.ಪಂ. ಸದಸ್ಯರಾದ ಬಿ. ರಾಜಣ್ಣ, ಸವಿತಾ ವೆಂಕಟಸ್ವಾಮಿ ಮಾತನಾಡಿದರು. ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ವೇಣುಗೋಪಾಲ್,  ಎಂಎಸ್‌ಎಂಇ ಡೆವಲಪ್‌ಮೆಂಟ್ ಆಡಳಿತಾಧಿಕಾರಿ ಶಂಕರನಾರಾಯಣ, ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.