ADVERTISEMENT

ರಾಜೀವ್ ಗಾಂಧಿ ಚಿಂತನೆ ಸಾಕಾರಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 4:45 IST
Last Updated 20 ಆಗಸ್ಟ್ 2012, 4:45 IST

ವಿಜಯಪುರ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೇಶದ ಪ್ರಗತಿಯ ಬಗ್ಗೆ ಅತ್ಯುತ್ತಮ ಮತ್ತು ದೂರಗ್ರಾಹಿಯಾದ ಪ್ರಗತಿಪರ ಚಿಂತನೆಗಳನ್ನು ಹೊಂದಿದ್ದರು. ಅವರ ಜನಪರ ಆಲೋಚನೆಗಳನ್ನು ಸಾಕಾರಗೊಳಿಸಲು ಯುವಕರು ಪ್ರಯತ್ನಿಸಬೇಕು ಎಂದು ಮಹಾತ್ಮಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಆರ್.ಶಂಕರ ರೆಡ್ಡಿ ತಿಳಿಸಿದರು.

ಪಟ್ಟಣದ ಮಹಾತ್ಮ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ (ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ) ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

  ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಯ್ಯಣ್ಣ ಮಾತನಾಡಿ, `ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯ ಮಹತ್ವ ಇಂದಿನ ಯುವಕರಿಗೆ ಮಹತ್ವಪೂರ್ಣವಾಗಿದೆ. ಯುವಕರನ್ನು ಆದರ್ಶ ನಾಗರಿಕರನ್ನಾಗಿ ಮಾಡಲು ಹಾಗೂ ಅವರಲ್ಲಿ  ಸಂಯಮ, ಧೈರ್ಯ, ತ್ಯಾಗ, ಸರಳತೆ, ತಾಳ್ಮೆ ಮುಂತಾದ ಒಳ್ಳೆಯ ಗುಣಗಳನ್ನು ಹಿರಿಯರು ತುಂಬು ದಿಸೆಯಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗಿದೆ ಎಂದು ಹೇಳಿದರು.  

ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ವಿ.ಶಿವಕುಮಾರ್ ಅಚಲಾ, ಭಾರತ ಸೇವಾ ದಳದ ಕಾರ್ಯಕರ್ತ ಎ.ಎಂ.ಮನು, ಶಾಲಾ ದೈಹಿಕ ಶಿಕ್ಷಕ ಜಿ.ವಿ.ಸಿದ್ದಲಿಂಗಯ್ಯ ಮಾತನಾಡಿದರು.

`ಭಾರತ ವೈಭವ~ ಪತ್ರಿಕೆ ಸಂಪಾದಕ ಮುನಿರಾಜು, ಎನ್.ನಾಗೇಂದ್ರ ಬಾಬು ಉಪಸ್ಥಿತರಿದ್ದರು. 
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ  ಸ್ಪಂದನ ಯುವಜನ ಸೇವಾ ಸಂಘದ ಕಾರ್ಯದರ್ಶಿ ವಿ.ಪ್ರಶಾಂತ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಭವ್ಯಾ ಪ್ರಾರ್ಥಿಸಿದರು. ಶಿಕ್ಷಕ ಈಶ್ವರಪ್ಪ ಉಕ್ಕಡ ಗಾತ್ರಿ ಸ್ವಾಗತಿಸಿ, ಸಿ.ಎಂ.ಚಂದ್ರಶೇಖರಪ್ಪ ವಂದಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಹರೂ ಯುವ ಕೇಂದ್ರ ಮತ್ತು ಸ್ಪಂದನ ಯುವಜನ ಸೇವಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.